Wednesday, October 10, 2012

ಲೂನ ಸಿ.ಕೆ.ಎಫ್ ೭೨೭೯

ನಮ್ಮ ತಾತನ ಸಿಂಗಲ್ ಸೀಟ್ ಲೂನ ಆಗ ತಾನೆ ಮೆಕ್ಯಾನಿಕ್ ಮುರುಗ ರಿಪೇರಿ ಮಾಡಿಕೊಟ್ಟಿದ್ದ, ಅದನ್ನ ಮನೆಯವರೆಲ್ಲರಿಗೂ ಓಡಿಸೋ ಹುಚ್ಚು ನಮ್ಮ ತಾತನನ್ನೂ ಸೇರಿಸಿ, ತಾತನಿಗಾಗಲೆ ೭೫ ವರ್ಷ, ಹಿಂದೆಂದೋ ಬಹಳಷ್ಟು ಹಳ್ಳಿಗಳಿಗೆ ಇದೇ ಲೂನಾದಲ್ಲಿ ತಿರುಗಾಡಿ ಎಲೆಕ್ಟ್ರಿಕ್ ಕೆಲಸ ಮಾಡಿದ್ದು ಉಂಟು. ರಿಪೇರಿ ಆಗಿ ಸುಮಾರು ವರ್ಷ ಮೂಲೆಯಲ್ಲಿ ಬಿದ್ದಿದ್ದ ಲೂನಾ, ನಮ್ಮ ಅಂಗಡೀಲೇ ಮೆಕ್ಯಾನಿಕ್ ಶಾಪ್ ಇಟ್ಟಿದ್ದ ಮುರುಗನ ಕಣ್ಣು ಕುಕ್ಕಿತ್ತು. ಇಸ್ಮಾಯಿಲ್ ಭಾಯ್ ಈ ನಡುವೆ ಮನೆಗೆ ಬಂದಿದ್ದು ನೋಡಿದ ಮುರುಗ, ಏನ್ ಸಾಯಬ್ರೆ ಈ ಕಡೆ ಅಂದನಂತೆ, ಅದಕ್ಕೆ ಇಸ್ಮಾಯಿಲ್, ಐನೋರು ಲೂನ ಮಾರ್ತೀನಿ ಅಂದಿದ್ರು ಅದಕ್ಕೆ ಬಂದಿದ್ದೆ ಅಂದಿದ್ದಾನೆ, ತಕ್ಷಣ ಮನೆಗೆ ಓಡಿ ಬಂದ ಮುರುಗ ಅಪ್ಪನಿಗೆ ಬುದ್ಧಿ ಹೇಳಿ ಕಮ್ಮಿ ಖರ್ಚಲ್ಲಿ ರಿಪೇರಿ ಮಾಡಿ ಕೊಡೋ ಮಾತು ಕೊಟ್ಟಿದ್ದ, ಆ ಮಾತಿನಂತೆ ೧೦ ವರ್ಷದಿಂದ ನಿಂತಿದ್ದ ಲೂನ ಅಂದು ಹೊರಗೆ ಬಂದಿತ್ತು ಅದೂ ಒಂದೇ ಕಿಕ್ಕಿಗೆ ಸ್ಟಾರ್ಟ್ ಆಗೋ ರೀತಿ, ಮನೆಯಲ್ಲಿ ಎಲ್ರುಗೂ ಸಂತೋಷವೋ ಸಂತೋಷ.

ಬಂದೊಡನೆ ಮೊದಲಿಗೆ ಬೀದಿಲಿ ನಿಲ್ಸಿ ಗಾಡಿ ಸುತ್ತಲೂ ಮೂರು ಮೂರು ಪಟ್ಟೆಯಂತೆ ವಿಭೂತಿ ಬಳೆದು, ಮಧ್ಯ ಕುಂಕುಮ ಇಟ್ಟು ಒಂದು ಹೊಸ ಸುಗಂಧರಾಜ ಹೂವಿನ ಹಾರ ಹಾಕಿ ಸಿಂಗಾರ ಮಾಡಾಯ್ತು, ಗಂಧದ ಕಡ್ಡಿ ಕರ್ಪೂರ ಆರತಿ ಮಾಡಿ, ಚಕ್ರಕ್ಕೆ ನಿಂಬೆಹಣ್ಣು ಇಟ್ಟಿದ್ದು ಆಯ್ತು, ಆಗ ಗಾಡಿ ನಿಂಬೆಹಣ್ಣಿನ ಮೇಲೆ ಓಡ್ಸಿ ಕಚಕ್ ಅನ್ನಿಸಬೇಕಾದಂತ ಪ್ರಸಂಗ, ಆದ್ರೆ ಯಾರು ಓಡ್ಸೋರು? ನಮಪ್ಪಂಗೆ, ಅಪ್ಪ, ನಾನು ನಾನು ಅಂತ ಅಂಗಲಾಚಿದೆ, ಹೇ ಸುಮ್ನಿರೋ ದೊಡ್ಡೋರು ತಾತ ಓಡುಸ್ಲಿ ಅಂದ್ರು, ತಾತಾ ನಾ..! ಒಂದು ಕಡೆ ನಿಕೃಷ್ಠ ಭಾವ, ೭೫ ರ ಮುದುಕ ಗಾಡಿ ಸ್ಟಾರ್ಟ್ ಕೂಡ ಮಾಡಕ್ಕಾಗಲ್ಲ ಅಂತ, ಈ ನಡುವೆ ಅಂತು ಪ್ರತಿದಿನ ನಾನೆ ಮಂಡಿಗೆ ಮುಲಾಮು ಹಚ್ಚಿ ನೀವುತ್ತಿದ್ದೆ, ಅಲ್ಲಿಯವರೆಗು ಸುಮ್ಮನೆ ನಿಂತಿದ್ದ ತಾತ, ಹೇ ಇರ್ಲಿ ನೀವೆ ಯಾರಾದ್ರು ಓಡುಸ್ರೊ ಅಂದ್ರು, ಅದಕ್ಕೆ ಅಪ್ಪ ಅಯ್ಯೊ ಇಲ್ಲ ನಿಮ್ಮ ಗಾಡಿ ನೀವೆ ಓಡ್ಸಿ ಅಂದ್ರು, ಆಗ್ಲಿ ಅಂತ ಬಂದ ತಾತ, ಒಂದೇ ಕಿಕ್ಕಿಗೆ ಸ್ಟಾರ್ಟ್ ಮಾಡಿ  ಜುಯ್ಯ್ ಅಂತಾ ನಿಂಬೆಹಣ್ಣಿನ ಮೇಲೆ ಓಡಿಸಿ ಪಚಕ್ ಅನ್ನಿಸಿ ಒಂದು ರೌಂಡ್ ಹೊಡೆದು ಬಂದರು.

ಮುಂದೆ ಅಪ್ಪನ ಸರದಿ, ಅವ್ರು ಸಹಾ ಗಾಡಿ ತೆಗೆದುಕೊಂಡು, ಹೊಲದವರೆಗೂ ಹೋಗಿ ಬರ್ತೀನಿ ಅಂದ್ರು, ನಾನು ನಾನು ಅಂದೆ, ಹೋಗ್ಲಿ ಹಿಂದೆ ಸೀಟಲ್ಲಿ ಕೂತ್ಕೋ ಅಂದ್ರು, ಆದ್ರೆ ಹಿಂದೆ ಸೀಟಿಲ್ಲ, ಬರಿ ಸೈಕಲ್ ಸ್ಟಾಂಡ್ ತರ ಒಂದಷ್ಟು ಜಾಗ, ಅದ್ರಲ್ಲೇ ಕೂತು ಎಗ್ಗು ತಗ್ಗಿನ ಹೊಲದ ದಾರೀಲಿ ಒಂದು ರೌಂಡ್ ಹೊಡೆದು ಬಂದ್ವಿ. ಮನೇಗೆ ಬರುವಷ್ಟರಲ್ಲೇ, ನಮಪ್ಪನ ಸ್ನೇಹಿತನ ಮಗ ಅಜಿತ ಬಂದಿದ್ದ, ಸುಮಾರು ೧೦೦ ಕೆ ಜಿ ಗಿಂತ ಹೆಚ್ಚು ತೂಕದ ಆಸಾಮಿ, ಹೀಗೆ ನಮ್ಮನೆ ಮುಂದೆ ನಡೆದು ಹೋಗುತಿದ್ನಂತೆ, ಲೂನಾ ನೋಡಿ ಒಳಗೆ ಬಂದಿದ್ದ. ಅಂಕಲ್ ಲೂನ ಹೊಸದಾಗಿ ತೊಗೊಂಡ್ರ? ಒಳ್ಳೆ ಮೈಲೇಜ್ ಬರುತ್ತೆ, ಮೈಂಟೇನನ್ಸ್ ಅನ್ನೋದೆ ಇಲ್ಲ, ಒಳ್ಳೆ ಗಾಡಿ ಚೆನ್ನಾಗಿಟ್ಕೋಳಿ ಅಂದ, ಅಮ್ಮ ಕಾಫಿ ತಂದುಕೊಟ್ರು ಕುಡಿದು ಹೊರಡೋವಾಗ, ಅಂಕಲ್ ಮರಳವಾಡಿ ಹತ್ರ ಈಶ್ವರನ ದೇವಸ್ಥಾನಕ್ಕೆ ಹೊರಟಿದ್ದೆ, ನಿಮ್ಮ ಲೂನ ಕೊಡ್ತೀರ? ಒಂದು ಲಾಂಗ್ ರೌಂಡ್ ಆದಂಗೂ ಆಗುತ್ತೆ, ಹೇಗ್ ರಿಪೇರಿ ಮಾಡಿದ್ದಾನೋ ಗೊತ್ತಾಗುತ್ತೆ ಅಂದ. ಅಪ್ಪನಿಗೂ ಹೌದು ಟೆಸ್ಟ್ ಮಾಡ್ಕೊಂಡು ಬರ್ಲಿ ಅನಿಸಿತ್ತು. ತೊಗೊಂಡೋಗಪ್ಪ ಅಂದುಬಿಟ್ರು, ನನಗೋ ಆ ದೇಹ ಗಾಡಿ ಮೇಲೆ ಕೂತ್ರೆ ಹೇಗೋ ಏನೋ ಅನ್ಸಿತ್ತು. ಒಬ್ಬನೇ ಹೋದ್ರೆ ಗಾಡಿ ಏನಾದ್ರು ಹಾಳು ಮಾಡಬಹುದು ಅಂತ ನಾನು ಬರ್ತೀನಿ ಅಂದೆ. ಅದಕ್ಕೆ ಅಪ್ಪನೂ ದೇವಸ್ಥಾನ ಅಂತಿದ್ಯ ಕರ್ಕೊಂಡೋಗಪ್ಪ ಅಂದ್ರು, ಸರಿ ಅಂಕಲ್ ಅಂತ ನನ್ನೂ ಕರ್ಕೊಂಡು ಸಿಂಗಲ್ ಸೀಟ್ ಲೂನ ಪ್ರಯಾಣ ಶುರು ಮಾಡಿದ. ಲೂನದ ಹಳೆಯ ಶಾಕಬ್ಸರ್ ಸ್ವಲ್ಪ ಕೆಳಗೆ ಹೋಗಿದ್ದು ರಸ್ತೆಯವರೆಲ್ಲ ಕಣ್ಣಗಲಿಸಿ ನೋಡುತಿದ್ದರು.

ಈಶ್ವರನ ದೇವಸ್ಥಾನ, ನಮ್ಮನೆಯಿಂದ ಸುಮಾರು ೧೦ ಕಿ.ಮಿ. ಕನಕಪುರದ ರಸ್ತೆ, ದಾರಿ ಸರಿಯಿಲ್ಲ, ಅಲ್ಲಲ್ಲಿ ಹೊಸದಾಗಿ ಹಾಕಿರುವ ಟಾರು ಅಲ್ಲಲ್ಲಿ ಗಾಡಿ ಓಡ್ಸೋಕೆ ಖುಷಿ ಕೊಡುತ್ತೆ, ಆದ್ರೆ ಇದ್ದಕಿದ್ದಂತೆ ದೊಡ್ಡ ದೊಡ್ಡ ಹಳ್ಳಗಳು. ಆ ರಸ್ತೇಲೆ ಲೂನದಲ್ಲಿ ನಾನು ಅಜಿತ ಬಿಂದಾಸ್ ಪ್ರಯಾಣ ಮಾದ್ತಿದ್ವಿ, ಅಜಿತನ ದೇಹ ಮೊದಲೇ ಹೇಳಿದಂತೆ ಊರಗಲ, ನಾನು ಹಂದೆ ಸೀಟಿನಲ್ಲಿ ಕೂತಾಗ ಮೊದಲೇ ಸೀಟಿಲ್ಲದೆ ಕ್ಯಾರಿಯರ್ ರೀತಿ ಕೆಳಗಿರುವುದರಿಂದ ನನಗೆ ಮುಂದೆ ರಸ್ತೆಯೇ ಕಾಣಿಸ್ತಿರ್ಲಿಲ್ಲ, ಲೂನ ಬಹಳಾ ಚೆನ್ನಾಗಿ ಓಡ್ತಿತ್ತು ಹೆಚ್ಛು ಹೊಗೆ ಇಲ್ಲದೆ, ಬ್ರೇಕುಗಳು ಅಲ್ಲಲ್ಲಿ ಸಲೀಸಾಗಿ ಹಿಡುಯುವಂತೆ, ಹಳ್ಳಗಳಲ್ಲಿ ಹಿತವಾದ ಶಕಬ್ಸರ್ ಅನುಭವ, ಹೀಗೆ ಮಧ್ಯೆ ಉತ್ತಮ ಡಾಂಬರು ರಸ್ತೆ ಸಿಕ್ತು, ದೊಡ್ಡ ಡೌನ್ ಬೇರೆ ಅದು, ಆ ನಿಲ್ದಾಣದ ಹೆಸರೆ ಕೆಮ್ಮಣ್ಣು ಡೌನ್ ಅಂತ, ಅಜಿತ ಪೂರ್ತಿ ಆಕ್ಸಲೇಟರ್ ಕೊಟ್ಟು ವೇಗವಾಗಿ ಗಾಡಿ ಓಡುಸ್ತಿದ್ದ, ಡೌನ್ ಹೋಗ್ತಾ ಹೋಗ್ತಾ ಇನ್ನೂ ವೇಗ ಹೆಚ್ಚಾಯ್ತು ಇದ್ದಕಿದ್ದಂತೆ ದೊಡ್ಡ ಹಳ್ಳ ರಸ್ತೆಯ ಎರಡು ಬದಿಯಲ್ಲೂ ದೊಡ್ಡ ಹೊಂಡ, ಏನು ಮಾಡಲಾಗದೆ ಹಳ್ಳದಲ್ಲಿ ಲೂನ ಇಳಿಸೇ ಬಿಟ್ಟ ಅಜಿತ, ಆ ವೇಗಕ್ಕೆ ಲೂನ ಸುಮಾರು ಐದಾರಡಿ ಎತ್ತರ ಹಾರಿತ್ತು. ನನಗೂ ಮೇಲೆ ಹಾರಿದ್ದಷ್ಟೆ ಗುರುತು, ನಂತರ ಸುಮಾರು ಹೊತ್ತು ಏನು ಗೊತ್ತಿರಲಿಲ್ಲ.

ಇಪ್ಪತ್ತು ನಿಮಿಷ ಆದ ಮೇಲೆ ಕಣ್ಣು ಬಿಟ್ಟಿದ್ದೆ, ಹಾರಿದ ರಭಸಕ್ಕೆ ಪಕ್ಕದ ಕಳ್ಳಿ ಗಿಡಗಳಲ್ಲಿ ಬಿದ್ದಿದ್ದನಂತೆ, ಅಲ್ಲೆ ಕೆಮ್ಮಣ್ಣು ಹೊಂಡದಲ್ಲಿ ಕೆಲಸ ಮಾಡುತಿದ್ದವ್ರು ಎತ್ತಿ ಕೂಡ್ಸಿದ್ರು ಒಂದಷ್ಟು ನೀರು ಮುಖಕ್ಕೆರಚಿ ಎಬ್ಸಿದ್ದಾರೆ, ಕಣ್ಣು ಬಿಟ್ಟೊಡನೆ ಅಜಿತನ ನೆನಪೇ ಆಗಿಲ್ಲ ಮೊದ್ಲು ಲೂನ ಎಲ್ಲಿ ನೋಡಿದೆ, ಲೂನದ ಹ್ಯಾಂಡಲ್ ಹಿಂದಕ್ಕೆ ತಿರುಗಿತ್ತು, ಮುಂದಿನ ಚಕ್ರ ಶಾಕಬ್ಸರ್ ಒಂದು ಕಡೆ ಕಳಚಿಬಿಟ್ಟಿತ್ತು. ಅಜಿತನ ನೋಡಿದೆ, ಗಾಳಿ ಹೋದ ಬಲೂನಿನ ಹಾಗೆ ಅಲ್ಲೆ ಕೂತಿದ್ದ, ಹೋಗಿ ಬಾರಿಸಿಬಿಡೋಣ ಅನ್ನೋ ಅಷ್ಟು ಕೋಪ ಬಂತು, ಆದ್ರೆ ಅವನ ದೇಹದ ಕಾಲು ಭಾಗ ಇದ್ದೇನೆ ನಾನು ಅಂತ ನನ್ನ ಮನಸು ಎಚ್ಚರಿಸಿತ್ತು. ಊರ ಕಡೆ ಯಾವ್ದೋ ಟ್ರಾಕ್ಟರ್ ಬರ್ತಿತ್ತು. ಹೇಗೋ ಅವ್ನು ನಾನು ಅಲ್ಲೇ ಇದ್ದ ಕೆಲವೆರು ಎತ್ತಿ ಅದ್ರೊಳಗೆ ಹಾಕುದ್ರು. ಗಾಡಿ ನಮ್ಮೂರು ಸೇರಿದ್ದೆ ತಡ, ಅಜಿತ ನಾನು ಮನೇಗ್ ಹೋಗಿ ಬರ್ತೀನಿ ಅಂಕಲ್ ಗೆ ಸಾರಿ ಹೇಳ್ಬಿಡು ನಾನೆ ಬಂದು ರೆಡಿ ಮಾಡಿಸಿಕೊಡ್ತೀನಿ ಅಂದು ಹೊರಟು ಹೋದ, ನಮ್ಮ ಮನೆಯ ರಸ್ತೆ ಕೊನೇಗೆ ಟ್ರಾಕ್ಟರ್ ಇಂದ ಗಾಡಿ ಇಳ್ಸಿ ಹೊರಟ್ರು.

ನಮ್ಮನೇ ರಸ್ತೇಲಿ ಬೆಳಗ್ಗೆ ತಿರುಗಾಡಿದ್ದ ಲೂನ ಮಧ್ಯಾಹ್ನ ನಾನು ತಳ್ಳಿಕೊಂಡು ಹೋಗುತಿದ್ದೆ, ಒಂದಿಬ್ಬರು ನೋಡಿದವ್ರು ಏನಾಯ್ತಪ್ಪ ಅಂದ್ರು, ಉತ್ತರ ಕೊಡಕ್ಕೆ ಮನ್ಸಾಗಲಿಲ್ಲ. ಮನೆ ಹತ್ರ ತಳ್ಕೊಂಡು ಹೋಗಿ ಬಿಟ್ಟು ಅಪ್ಪನ್ನ ಕರ್ದೆ, ಆಚೆ ಬಂದು ಲೂನ ನೋಡಿದವ್ರೆ, ನನ್ ಮಗನೆ ಎಲ್ಲಿ ಬಿದ್ದು ಬಂದೆ ಅಂತ ರಪರಪ ಬಾರಿಸಲು ಶುರು ಮಾಡಿದ್ರು. ಮನೆ ಒಳಗೆ ಓಡಿ ಹೋಗಿ ತಾತನ ಹಿಂದೆ ನಿಂತೆ, ತಾತ ಏನಾಯ್ತೋ ಯಾಕೋ ಹೊಡೀತ್ಯ ಹುಡುಗನಿಗೆ ಅಂತ ಅಂದ್ಕೊಂಡು ಬಂದ್ರು, ಲೂನಾದ ಅವಸ್ಥೆ ನೋಡಿ ಒಂದು ಕ್ಷಣ ದಂಗಾಗಿದ್ರು. ಆದ್ರು ಏನು ಹೇಳಲಾಗದೆ ಹೋಗ್ಲಿ ಬಿಡೊ ಅಂದು ಒಳಗೆ ಹೊರಟೋದ್ರು. ಅವರ ನಡಿಗೆಯಲ್ಲಿ ಬಹಳಾ ನೋವಿದ್ದಿದ್ದು ನನ್ನ ಕಣ್ಣುಗಳಿಗೆ ಅರ್ಥವಾಗಿತ್ತು.

ಅಜಿತ ಲೂನ ರೆಡಿ ಮಾಡಿಸಿಕೊಡ್ತೀನಿ ಅಂತ ಹೇಳಿ ಹೋದವ್ನು ಸುಮಾರು ಎರಡು ವರ್ಷವಾದ್ರು ಮನೆಗೆ ಬಂದಿಲ್ಲ, ನಾವು ಲೂನ ಹಿಂದೆ ಗೋಡೋನಲ್ಲಿ ಹಾಕಿದ್ವಿ ಹೋದವರ್ಷ ಅದು ಕಳ್ತನ ಆಗೋಗಿದೆ, ಆದ್ರ ಅದರ ನೆನಪು ಮಾತ್ರ ಇನ್ನೂ ಹಾಗೆ ನನ್ನ ಮನದ ಮೇಲೆ ಅಚ್ಚಾಗಿದೆ. ಅದ್ರ ನಂಬರ್ ಸಹ. " ಸಿ.ಕೆ.ಎಫ್ ೭೨೭೯ ". .

2 comments:

  1. ಒಳ್ಳೆಯ ನೆನೆಪಿನ ಅಂಗಳ ಕೆದುಕಿದ ಬರಹ.

    ReplyDelete
  2. ಬಹಳ ಧನ್ಯವಾದ ಬದ್ರಿ ಅಣ್ಣ :)

    ReplyDelete