Tuesday, September 2, 2014

ಚಡಪಡಿಕೆ

ಹುಡುಕುತ್ತಿರುವೆ, ಮತ್ತೆ ಮತ್ತೆ ಹುಡುಕುತ್ತಿರುವೆ
ಚಡಪಡಿಕೆ ನಿರಂತರ
ಮನವು ಹರಿವ ನದಿಯಂತಾಗಿದೆ
ಯಾವ ದಾರಿಯೋ ಏನೋ
ಯಾವ ಸಾಗರದಲ್ಲಿ ಲೀನವಾಗುವೆನೋ ಏನೋ

ಎಲ್ಲೋ ದೂರದಲ್ಲೊಂದು ಆಕೃತಿ
ಎತ್ತರ ನನ್ನನ್ನೇ ಹೋಲುತ್ತಿದೆ
ಧ್ವನಿಯೂ ನನ್ನದೇ..
ಇಗೋ ಈಗಲೇ ಮಾತನಾಡಿಸಲು ಹತ್ತಿರ ಹೊರಟೆ...
ಅರೆ! ಮಾಯವಾಯ್ತಲ್ಲ
ನನ್ನ ನಾನೇ ಅಷ್ಟು ದೂರ ಕಂಡೆನೇನು

ಯಾವುದೋ ಕನಸು ನನ್ನ ಕಾಡುತ್ತಿದೆ
ಸುಪ್ತವಾಗಿ ಕೂತಿದ್ದ ಆಸೆಗಳೆಲ್ಲ
ಒಮ್ಮೆಲೇ ಚಿಮ್ಮಿ ಸುನಾಮಿ ಎಬ್ಬಿಸಿದೆ
ಹರಿದು ಬಿಡಲೇ
ಯಾವುದೇ ಅಣೆಕಟ್ಟುಗಳಿಗೂ ಅಂಜಬೇಕಿಲ್ಲ
ನನ್ನೀ ಉತ್ಕಟ ಆಸೆ ನಿರ್ಧಾರಗಳಿಗೆ
ಎಲ್ಲವನ್ನೂ ದಾಟುವ ಶಕ್ತಿಯಿದೆ

ಪವನ್ ಪಾರುಪತ್ತೇದಾರ

Sunday, June 2, 2013

ಪವನ್'ಸ್ ಡೈರೀಸ್ - 6

ಆಶಾಡದ ಗಾಳಿ ಬೀಸಲು ಶುರುವಾಗಿದ್ದ ಕಾಲ, ಶಾಲೆ ಬಿಟ್ಟರೆ ಸಾಕು ಮನೆಕಡೆ ಓಡಿ ಗಾಳಿಪಟ ಹಾರಿಸೋ ಕಾಲ.
ಕಡೆಯ ಪೀರಿಯಡ್ಡಿನ ಉದ್ದನೆ ಕಿರ್ರ್ ಎಂಬ ಬೆಲ್ಲು ಮುಗಿಯುವಷ್ಟರಲ್ಲೇ ಅರ್ಧ ಮನೆಯ ದಾರಿ ತಲುಪುವಷ್ಟು ಓಡಿಬಿಡುತಿದ್ದೆ ಅಷ್ತು ಹತ್ತಿರವೈತ್ತು ನಮ್ಮನೇಗು ಶಾಲೆಗು. ಮನೆಗೆ ಬಂದು ಗಾಳಿಪಟ ಹೊತ್ತು ಬೀದಿಯಲ್ಲೆ ಹಾರಿಸಲು ಶುರು, ಆದರೆ ಪ್ರತಿ ದಿನ ಒಂದಲ್ಲ ಒಂದು ತೊಡರು, ಕರೆಂಟ್ ತಂತಿಗೋ ಎದುರು ಮನೆ ನೀಲಗಿರಿ ಮರಕ್ಕೊ ಅಥವಾ ನಮ್ಮನೆ ತೆಂಗಿನ ಮರಕ್ಕೋ ಪಟ ಸಿಕ್ಕಿ ಹಾಕಿಕೊಂ...ಡುಬಿಡುತಿತ್ತು. ಅದನ್ನ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿ ಪಛರಿದು ಹೋಗ್ತಿತ್ತು. ಮತ್ತೆ ಪ್ರಜಾವಾಣಿಯ ಹಾಳೆ ಸ್ವಲ್ಪ ಅನ್ನದ ಅಗುಳು ಮತ್ತು ಎರಡು ತೆಂಗಿನ ಕಡ್ಡಿ ಹೊತ್ತು ಮೂಲೆ ಮನೆ ನಾಗಣ್ಣನ ಹತ್ರ ಓಡ್ತಿದ್ದೆ.

ನಾಗಣ್ಣ ನೇಯ್ಗೆ ಕೆಲಸಗಾರ, ಗಾಳಿಪಟ ಹಬ್ಬದ ದಿನ ವಿಚಿತ್ರವಾದ ಗಾಳಿಪಟಗಳನ್ನೆಲ್ಲಾ ಹಾರಿಸ್ತಾ ಇದ್ದ, ಅದಕ್ಕೆ ನಮಪ್ಪನ್ನ ಸಹ ನಾನು ಯಾವತ್ತು ಗಾಳಿಪಟ ಮಾಡಿಕೊಡು ಅಂತ ಕೇಳ್ತಿರ್ಲಿಲ್ಲ. ನಾಗಣ್ಣನ ಹತ್ರ ಹೋಗಿ ಗಾಳಿಪಟಕ್ಕೆ ಬೇಕಾದ ವಸ್ತುಗಳನ್ಢ ಹಿಡಿದು ನಿಂತರೆ ಸಾಕು, ಲಟ ಪಟ ಲಟ ಪಟ ಎಂದು ಬಡಿಯುವ ಮಗ್ಗಕ್ಕೆ ಲಾಳಿ ಬದಲಿಸಿ ಮತ್ತೊಂದು ಬಾಬಿನ್ ಕೇಳುವಷ್ಟ್ರರಲ್ಲಿ ನಂಗೊಂದು ಗಾಳಿಪಟ ಮಾಡಿಕೊಡ್ತಿದ್ದ. ನಾಗಣ್ಣ ಲಾಂಡಾ ಬೇಡ ನೆತ್ತಿ ಸೂತ್ರ ಹಾಕ್ಕೊಡು ಅಂತ ಹಾಕುಸ್ಕೊಂಡು ಪಟ ಹಿಡ್ಕೊಂಡು ಅಮ್ಮನ ಬಳಿ ಓಡಿಬರ್ತಿದ್ದೆ. ಅಮ್ಮ ಯಾವುದೋ ಹಳೇ ಪಂಚೆ ಸೀರೆ ಹರಿದು ಬಾಲಂಗೋಸಿಗೆ ಅಂತ ಕೊಡೋರು, ಅದನ್ನ ಪಟಕ್ಕೆ ಕಟ್ಟಿ ನೈಲಾನ್ ದಾರ ಸೇರ್ಸಿ ಹತ್ತಿಸಿ ಇನ್ನೇನು ನನ್ನ ಗಾಳಿಪಟ ಮುಗಿಲು ಮುಟ್ಟುತ್ತದೆ ಅನ್ನೋ ಅಷ್ಟ್ರಲ್ಲೇ ಕರೆಂಟು ಕಂಬಕ್ಕೋ ತೆಂಗಿನ ಮರಕ್ಕೋ ಸಿಕ್ಕಿ ಹರಿದು ಹೋಗ್ತಿತ್ತು.

ಹಬ್ಬ ಹತ್ತಿರ ಬರ್ತಿತ್ತು ಈ ಸಲಿ ಏನಾದ್ರು ಆಗಲಿ ನನ್ನ ಪಟ ಆಕಾಶಕ್ಕೆ ಹಾರಲೇ ಬೇಕು ಅನ್ನೋ ಆಸೆ ಇತ್ತು ನನಗೆ, ಆದರೆ ಪೇಪರ್ ಗಾಳಿಪಟ ಅಷ್ಟು ಮೇಲೆ ಹೋಗೋ ನಂಬಿಕೆ ಇರಿಲ್ಲ ನನಗೆ, ಅಪ್ಪನ ಹತ್ರ ಕಾಡಿಬೇಡಿ ೧೦ ರೂ ಅಮ್ಮನ ಹತ್ರ ೧೦ ರೂ ತಾತನ ಹತ್ರ ೫ ರೂ ಪಡೆದಿದ್ದೆ. ಬರೀ ನೈಲಾನ್ ದಾರವಾದ್ರೆ ಪಟ ಮೇಲೆ ಹಾರಿದಾಗ ಗಾಳಿಯ ರಭಸ ಹೆಚ್ಚಾಗಿ ದಾರ ಕತ್ತರಿಸೋ ಸಾಧ್ಯತೆ ಇತ್ತು ಅದಕ್ಕೆಂದೇ ನಾಗಣ್ಣನ ಪುಸಲಾಯಿಸಿ ದಾರಕ್ಕೆ ಮಾಂಜಾ ಹಾಕಿಕೊಡಲು ಒಪ್ಪಿಸಿದ್ದೆ. ಗಾಳಿಪಟ ಹಾರಿಸುವಾಗ ಮಾಂಜಾದಾರ ಬಹಳಾ ಅವಶ್ಯ, ನಮ್ಮ ಪಟ ಹಾರಿಸಿದಾಗ ಆಕಾಶದಲ್ಲೆ ಗಾಳಿಪಟದ ಯುದ್ಧಗಳು ನಡೆಯುತ್ತವೆ, ಪೇಂಚ್ ಹಾಕೋದು ಅಂತಾರೆ ಅದನ್ನ, ಪೇಂಚ್ ಹಾಕಿ ನಮ್ಮ ಪಟದ ದಾರವನ್ನು ಬೇರೆಯವರು ತಮ್ಮ ಕಡೆ ಎಳೆದುಕೊಳ್ತಾರೆ, ಅಕಸ್ಮಾತ್ ಎಳೆಯೋ ಭರದಲ್ಲಿ ನಮ್ಮ ಪಟದ ದಾರ ಪುಸಕಲಾಗಿದ್ದಲ್ಲಿ ಮಾಂಜಾ ಇಲ್ಲದಿದ್ದಲ್ಲಿ ಪಟ ಕಟ್ ಆಗಿ ಹೋಗುತ್ತದೆ. ಅದಕ್ಕೆ ಹಬ್ಬಕ್ಕೆ ಮಾಂಜಾದಾರವನ್ನೇ ಬಳಸಬೇಕು ಅಂತ ಮೊದಲೇ ನಿರ್ಧಾರ ಮಾಡಿದ್ದೆ.

ಮಾಂಜಾ ದಾರ ಮಾಡೋದು ಒಂದು ರೀತಿಯ ಕಲೆ, ನಗರ್ತರ ಪೇಟೆಯಲ್ಲಿ 3 ರೂನ ದೊಡ್ಡ ಗಾಳಿಪಟದ ಜೊತೆ ಮಾಂಜಾ ಗಡ್ಡೆಗಳು ಮತ್ತೆ ಒಮ್ದು ದೂಡ್ಡ ಬಾಬಿನ್ ನೈಲಾನ್ ದಾರ ತಂದಿದ್ದೆ. ಹಾಗೆ ಪಾಂಪುಟ್ಟಿಗಳ ( ಪೇಪರ್ ಆಯುವವರು ಅಥವಾ ಹಕ್ಕಿಪಿಕ್ಕಿಗಳು) ಸಹಾಯದಿಂದ ಬಿಸಾಕಿರುವ ಟ್ಯೂಬ್ಲೈಟನ್ನು ನುಣ್ಣಗೆ ಪುಡಿ ಮಾಡಿಸಿಕೊಂಡು ಬಂದಿದ್ದೆ, ಅದಕ್ಕೆ ಅವರಿಗೆ 2 ಕೊಟ್ಟಿದ್ದೆ ಕೂಡ. ಪಟ ಜೋಪಾನವಾಗಿ ಮನೆಯೊಳಗಿಟ್ಟು ಮಾಂಜಾ ಗಡ್ಡೆಗಳನ್ನ ಮತ್ತು ದಾರವನ್ನ ಹೊತ್ತು ನಾಗಣ್ಣನ ಬಳಿ ಹೋಗಿದ್ದೆ, ನಾಗಣ್ಣ ಅಲ್ಲೆ ಮನೆ ಪಕ್ಕ ಖಾಲಿಜಾಗದಲ್ಲಿದ್ದ ಒಮ್ದಷ್ಟು ಸೊಪ್ಪುಸೆದೆ ಆಯ್ದು ಬೆಂಕಿಹಚ್ಚಿ ಅದರೆ ಮೇಲೆ ಮಡಿಕೆ ಇಟ್ಟು ಎರಡು ಕೋಳಿಮೊಟ್ಟೆ ಮಾಂಜಾ ಗಡ್ಡೆ ಜೊತೆ ಸ್ವಲ್ಪವೇ ಸ್ವಲ್ಪ ನೀರು ಬೆರೆಸಿ ಕುದಿಸಿದ. ಸ್ವಲ್ಪ ಹೊತ್ತು ಕುದ್ದಮೇಲೆ ನೈಲಾನ್ ದಾರವನ್ನು ಅದರಲ್ಲಿ ಅದ್ದಿ ಎರಡು ಮರಗಳ ನಡುವೆ ಪೂರ್ತಿ ಬಾಬಿನ್ ದಾರವನ್ನು ಸುತ್ತಿದ. ನಂತರ ಟ್ಯೂಬ್ಲೈಟ್ ಪುಡಿಯನ್ನು ಕೈಗೆ ಕವರ್ ಹಾಕಿಕೊಂಡು ತೆಗೆದುಕೊಂಡು ಪೂರ್ತಿ ದಾರಕ್ಕ ಮೆತ್ತಿದ. ಅದು ಆರಲು ಸುಮಾರು ೩ ಘಂಟೆಗಳ ಕಾಲ ಬೇಕು, ಅಲ್ಲಿವರೆಗು ಅಲ್ಲೇ ಕಾದಿದ್ದೆ. ಆಮೇಲೆ ದಾರ ಪೂರ್ತಿ ನಾಗಣ್ಣ ಮತ್ತೆ ಬಾಬಿನ್ನಿಗೆ ಸುತ್ತಿ ಕೊಟ್ಟ, ಅಬ್ಬ ಅಂತು ಇಂತು ಮಾಂಜಾ ದಾರ ರೆಡಿ, ಯಾವುದೋ ಆಯುಧ ಕೈಗೆ ಸಿಕ್ಕಂತಾಯ್ತು. ಮನಸಲ್ಲೇ ಈಗ ಹಾಕ್ಲಿ ನನ್ನ ಪಟಕ್ಕೆ ಪೇಂಚು, ಯಾವನ್ ಹಾಕ್ತಾನೋ ಅವ್ನ ದಾರಾನೆ ಕಟ್ಟು ಅಂದುಕೊಂಡು ಮನೇಗೆ ಮರಳಿದೆ.

ಗಾಳಿಪಟದ ಹಬ್ಬ ಬಂದಾಯ್ತು, ಈ ಸಲಿ ನಾಗಣ್ಣ ತನ್ನ ತರಾವರಿ ಗಾಳಿಪಟದ ಸಿದ್ಧತೆಯಲ್ಲಿದ್ದ, ಅದಕ್ಕೆ ನನ್ನ ಪಟಕ್ಕೆ ನಾನೆ ನಾಗಣ್ಣನ ಬಳಿ ನೋಡಿ ಕಲಿತಿದ್ದ ನೆತ್ತಿ ಸೂತ್ರ ಹಾಕ್ಕೊಂಡಿದ್ದೆ. ಯಾವುದೇ ಮರಗಿಡಗಳಿಗೆ ಕರೆಂಟ್ ಕಂಬಕ್ಕೆ ಸಿಕ್ಕಬಾರದೆಂದು ಮನೆಯ ಮಾಡಿ ಮೇಲಿನಿಂದ ಪಟ ಹಾರಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಅಂದು ಗಾಳಿಪಟದ ಹಬ್ಬ ಬೇರೆ, ಆಕಾಶದ ತುಂಬೆಲ್ಲ ಪಟಗಳ ಚಿತ್ತಾರ, ಅವುಗಳ ನಡುವೆಯೇ ನನ್ನ ಪಟ ಸಹ ಹಾರಿಸಿದ್ದೆ, ನನ್ನ ಅದೃಷ್ಟವೋ ಏನೋ ಎಂಬುವಂತೆ ಯಾವುದೇ ಲೈಟು ಕಂಬ ತೆಂಗಿನ ಮರ ನೀಲಗಿರಿ ಮರಕ್ಕೆ ಸಿಕ್ಕಿಕೊಳ್ಳದೆ ಪಟ ಮೇಲೆ ಹಾರುತಿತ್ತು. ಅಕ್ಕ ಪಕ್ಕದ ಮನೆ ಗೆಳೆಯರು ಸಹ ನನ್ನ ಪಟದ ಓಘ ನೋಡಿ ಮಹಡಿ ಮೇಲೆ ಬಂದರು, ನಾನು ಮಾಂಜಾ ದಾರದ ಪೂರ್ತಿ ಡೀಲ್ ಬಿಟ್ಟಿದ್ದೆ, ಬಂದ ಗೆಳೆಯರು ಲೋ ಎಲ್ಲೋ ನಿನ್ನ ಪಟ ಎಂದು ಕೇಳುವಾಗ ಅಕೋ ಅಲ್ಲಿ ಚಿಕ್ಕದಾಗಿ ಸೂರ್ಯನ ತರ ಡಿಸೈನ್ ಇದ್ಯಲ್ಲ ಅದೇ ಅಂತ ತೋರುಸ್ತಿದ್ದೆ, ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಡುವೆಯೇ ಯಾರೋ ಪೇಂಚು ಹಾಕಿದರು, ಮಾಂಜಾ ಪ್ರಭಾವ ನಾ ಒಂದೆರಡು ಸಲಿ ಜಗ್ಗಿದ್ದಕ್ಕೆ ಅವರ ದಾರವೇ ಕಟ್ ಆಗಿತ್ತು. ನನ್ನೊಡನೆ ನನ್ನ ಪಟ ನೋಡುತಿದ್ದ ಗೆಳೆಯನೊಬ್ಬ ಪಟ ಕಟ್ಟು ಅಂತ ಕಟ್ ಆದ ಗಾಳಿಪಟದ ಬೆನ್ನೇರಿ ಹೊರಟ. ನನ್ನ ಗಾಳಿಪಟ ಮುಗಿಲ ಚುಂಬಿಸಿ ನರ್ತಿಸುತಿತ್ತು. ಅಪ್ಪ ಅಮ್ಮ ಎಲ್ಲರನ್ನು ಕರೆದು ತೋರಿಸಿದೆ ಪೇಪರ್ ಚೂರುಗಳನ್ನು ದಾರದಲ್ಲಿ ಸೇರಿಸಿ ಜಗ್ಗಿ ಜಗ್ಗಿ ಸಂದೇಶವನ್ನು ನನ್ನ ಪಟಕ್ಕೆ ಕಳುಹಿಸುತಿದ್ದೆ.

ಇದ್ದಕ್ಕಿದ್ದಂತೆ ಯಾಕೋ ನನ್ನ ಕೈ ಸಡಿಲವಾದಂತನಿಸಿತು, ನೋಡಿದರೆ ನನ್ನ ಗಾಳಿಪಟದ ದಾರ ಕಟ್ಟಾಗಿಬಿಟ್ಟಿತ್ತು, ನನ್ನ ಪಕ್ಕದಲ್ಲಿದ್ದ ಗೆಳೆಯನೊಬ್ಬ ಪಟ ಕಟ್ಟು ಎಂದು ಕಿರುಚಿದ, ನನ್ನ ಕಣ್ಮುಂದೆಯೇ ನನ್ನ ನನಸಾಗಿದ್ದಂತಹ ಕನಸು ಒಡೆದು ಹೋಗಲು ಶುರುವಾಗಿಬಿಟ್ಟಿತ್ತು, ಪಟವನ್ನೇ ದಿಟ್ಟಿಸಿ ನೋಡುತ್ತ ಅದರ ಹಿಂದೆ ಓಡಲು ಶುರು ಮಾಡಿದೆ, ಓಡಿದೆ ಓಡಿದೆ ಓಡುತ್ತಲೇ ಇದ್ದೀನಿ, ಇಂದಿಗೂ ಸಹ ನನ್ನ ಆ ಗಾಳಿಪಟ ಸಿಕ್ಕಲೇ ಇಲ್ಲ. ಹುಡುಕುತ್ತಲೇ ಇದ್ದೀನಿ ಕಳೆದು ಹೋದ ನನ್ನ ಬಾಲ್ಯದ ಆ ಸಿಹಿ ನೆನಪುಗಳನ್ನ, ಎಲ್ಲಿಯೂ ಸಿಗುತ್ತಿಲ್ಲ. ನೀವು ಸಹ ಆ ಕನಸುಗಳ ಹಿಂದೆ ಓಡುತಿದ್ದೀರಿ ಅಲ್ಲವೇ ಗೆಳೆಯರೆ??

ಪ್ರೀತಿಯಿಂದ

ಪವನ್ ಪಾರುಪತ್ತೇದಾರ.

ಪವನ್'s ಡೈರೀಸ್ - ೫

ನಂದೂ ಮತ್ತೊಂದು ಪ್ರೀತಿ ಹುಡುಕುತಿದ್ದ ಕಾಲ, ಓದಿನಲ್ಲಿ ಅಂತಹ ಹಿಂದೆ ಏನಿರಲಿಲ್ಲ ಬಿಡಿ. ನಾ ಮಾಡಿದ್ದ ತಪ್ಪುಗಳಿಂದ ಪಾಠ ಕಲಿತು ವಿದ್ಯೆ ನೈವೇದ್ಯೆ ಮಾಡಿಕೊಳ್ಳುವ ಬದಲು ಒಂದು ತಹಬದಿಗೆ ತಂದ್ ನಿಲ್ಲಿಸಿದ್ದೆ. ಕ್ರಿಕೆಟ್ ಆಡೋದು ಅಂದ್ರೆ ಅದೇನೋ ಒಂದು ರೀತಿಯ ಅಮಲಿನ ಹಾಗೆ ಕಾಲೇಜ್ ಮುಗಿಸಿಕೊಂಡು 4.30 ಕ್ಕೆ ಪ್ರತಿ ದಿನ ಕ್ರಿಕೆಟ್ ಪ್ರಾರಂಭಿಸಲಿಲ್ಲ ಅಂದ್ರೆ ಬದುಕಿನಲ್ಲಿ ಏನೋ ಮಿಸ್ ಮಾಡಿಕೊಂಡಂತಹ ಅನುಭವ. ಪ್ರತಿದಿನ ಕ್ರಿಕೆಟ್ ಆಡಿದ ಮೇಲೆ ವಯಸ್ಸಿಗೆ ತಕ್ಕಂತಹ ಚರ್ಚೆ ...ಅಡ್ಡದಲ್ಲಿ ಕೂತು ಮಾಡೋದು ಸರ್ವೇ ಸಾಮಾನ್ಯ, ಮಗಾ ಕೆಳಗಡೆ ತೇರು ಬೀದಿಲಿ ಒಬ್ಳು ಇದ್ದಾಳೆ ನೋಡಿದ್ಯ, ಸಕ್ಕತ್ತಾಗಿದ್ದಾಳೆ. ಹೇ ಮಗಾ ಚರ್ಚ್ ಪಕ್ಕದ ಮನೆ ಹುಡುಗೀನ ನೋಡಿದ್ಯ ಅವ್ಳು ಮೊನ್ನೆ ಬಸ್ ಸ್ಟಾಪಲ್ಲಿ ಸ್ಮೈಲ್ ಕೊಟ್ಲು, ಹೀಗೆ ವಯೋಗುಣದ ಮಾತುಗಳು, ನಾವೆಲ್ಲ ಆಗ ಸುಮಾರು 18 ರಿಂದ 20 ಸುಮಾರಿನವರು. ಹೀಗೆ ಮಾತು ಮಾತಲ್ಲಿ ಯಾರೋ, ಹೇ ನಮ್ ರಾಜೇಶ ಗೊತ್ತ, ಅವ್ನು ಒಂದು ಹುಡುಗೀಗೆ ಕಾಳಾಕ್ತಾ ಅವ್ನೆ ಹುಡಿಗಿ ಇರೋದು ಮಡಿಕೆ ಮಾರ್ತಾರಲ್ಲ ಸಂತೇಲಿ, ಅವ್ರ ಎದ್ರು ಮನೆ ಮಾಡಿ ಮೇಲೆ. ದಿನಾ ರಾಜೇಶ ಜಿಮ್ ಗೆ ಹೋಗಿ ಬರೋವಾಗ ಆ ಹುಡುಗೀ ಮನೆ ಮುಂದೆ ಸ್ವಲ್ಪ ಹೊತ್ತು ನಿಂತ್ಕೊಂಡು ಸೈಟ್ ಹಾಕ್ಕೊಂಡ್ ಬರ್ತಾನೆ ಅಂದ್ರು.ರಾಜೇಶ ನಂಗೂ ಒಳ್ಳೆಯ ಸ್ನೇಹಿತ, ಈ ವಿಷಯ ಯಾವತ್ತು ನನ್ನ ಬಳಿ ಹಂಚ್ಕೊಂಡೇ ಇರ್ಲಿಲ್ಲ. ಆವತ್ತು ಅವ್ನು ಆಡಕ್ಕೆ ಬಂದಿರ್ಲಿಲ್ಲ, ಅದಕ್ಕೆ ಅವನ ವಿಷಯ ಪ್ರಸ್ತಾಪ ಆಯ್ತು ಅನ್ಸುತ್ತೆ. ಎಲ್ಲೋಗ್ತಾನೆ ನನ್ಮಗ ಸಿಕ್ಕಾಗ ವಿಚಾರಿಸ್ಕೊಳ್ಳೋಣ ಅಂತ ಸುಮ್ನಾದೆ.

ಮಾರನೆಯ ದಿನ ರಾಜೇಶ ಸಿಕ್ದ, ಸ್ವಲ್ಪ ವಿಚಾರಿಸ್ಕೊಂಡೆ ನನ್ ಮಗನೆ ಏನು ಮಾಟೆರ್ರು, ನನ್ ಹತ್ರ ಹೇಳೆ ಇಲ್ಲ ನಾವೆಲ್ಲ ಅಷ್ಟು ಬೇಡವಾಗೋದ್ವ ಅಂತ, ಆಗ ಎಲ್ಲ ವಿಷಯ ಬಿಡಿಸಿ ಬಿಡಿಸಿ ಹೇಳಿದ. ಆ ಹುಡುಗೀನ ಸುಮಾರು 3 ವರ್ಷದಿಂದ ಪ್ರೀತಿಸುತಿದ್ದಾನೆಂದು, ಪ್ರತಿ ದಿನ ಜಿಮ್ ಮುಗಿಸಿ ಬರೋವಾಗ ಅವರ ಮನೆ ಮುಂದೆ ಹೋಗಿ ನಿಲ್ತಾನೆಂದು, ಆಗೆಲ್ಲಾ ಆ ಹುಡುಗಿ ಆಚೆ ಬಂದು ಸ್ಮೈಲ್ ಮಾಡ್ತಾಳೆಂದು ಹೇಳ್ಕೊಂಡ. ಆ ಹುಡುಗಿಯ ಸ್ಮೈಲ್ ಬಗ್ಗೆ ಹೇಳ್ಕೊಳ್ಳೋವಾಗ ರಾಜೇಶನ ಮುಖದ ಮೇಲೆ ಮೂಡಿದ ಗೆಲುವು ಎಷ್ಟು ಕ್ಯಾಂಡಲ್ ಬಲ್ಬ್ ಹಚ್ಚಿದರೂ ಸಿಗದು. ನನಗಾಗಲೇ ಮುಂದಿನ ಪ್ರಶ್ನೆ ನಿಶ್ಚಯವಾಗಿತ್ತು. ನಿನ್ ಪ್ರೀತಿ ವಿಶ್ಯ ಹೇಳಿದ್ಯ ಅಂತ ಕೇಳ್ದೆ, ಇಲ್ಲ ಮಗಾ, ಅಮ್ಮಂಗೆ ಹೇಳಿದ್ದೀನಿ ಮದ್ವೆ ಆದ್ರೆ ಆ ಹುಡುಗೀನೆ ಆಗೋದು ಅಂತ, ಅಮ್ಮ ಕೂಡ ನೋಡಿ ಒಪ್ಪಿದ್ದಾರೆ ಅಂದ. ಹಾಗಾದ್ರೆ ನಡಿ ಆ ಹುಡುಗೀಗೆ ಹೇಳಣ ಅಂದೆ. ಭಯಾ ಆಗುತ್ತೆ ಮಗಾ, ಅಂತ ಪೇಚಾಡುತಿದ್ದ, ಏನು ಹೆದ್ರಬೇಡ ನಡೀ ಹೇಳನ ಅಂತ ಬಲಂತ ಮಾಡಿದೆ. ಸರಿ ನಾಳೆ ಕಾಲೇಜಿಗೆ ಹೋಗೋವಾಗ ಅವಳ ಬಸ್ಸಲ್ಲೇ ಹೋಗಿ ಹೇಳೋಣ ಅಂತ ಡಿಸೈಡ್ ಮಾಡಾಯ್ತು.

ಮಾರನೆದಿನ ಟಿಪ್ಟಾಪಾಗಿ ರಾಜೇಶ ರೆಡಿ ಆಗಿ ಬಂದಿದ್ದ, ನಾನು ನನ್ನ ಕಾಲೇಜಿನ ಯೂನಿಫಾರಂ ಧರಿಸಿ ಬಂದಿದ್ದೆ. ನಮ್ಮದು ಕೆಂಪು ಬಸ್ಸು ಮೂರು ಸೀಟಿನ ಬಳಿ ಆ ಹುಡುಗಿ ಕೂತ್ರೆ ಇಬ್ಬರು ಹೋಗಿ ಅವಳ ಪಕ್ಕ ಕೂರೋದು ಅನ್ನೋ ನಿಶ್ಚಯ ಆಯ್ತು, ಎರಡು ಸೀಟಿನ ಬಳಿ ಕೂತರೆ, ರಾಜೇಶ ಹೋಗಿ ಪಕ್ಕದಲ್ಲಿ ಕೂರೋ ಹಾಗೆ ನಿರ್ಧಾರ ಆಯ್ತು. ನನ್ನ ದುರಾದೃಷ್ಟವೋ ಅಥವಾ ರಾಜೇಶನ ಅದೃಷ್ಟವೋ ಎರಡು ಸೀಟಿನ ಸೀಟಲ್ಲಿ ಕೂತಳು ಆ ಹುಡುಗಿ. ರಾಜೇಶ ಕೂಡ ಪಕ್ಕದಲ್ಲಿ ಧೈರ್ಯವಾಗಲ್ಲದಿದ್ದರೂ ನಾಚಿಕೆಯಿಂದಲೇ ಕೂತ. ಆಗೆಲ್ಲ ಮೊಬೈಲ್ ಇರಲಿಲ್ಲ, ನಾನು ಅವನ ಪಕ್ಕದ ಕಾರ್ನರ್ ಸೀಟಲ್ಲಿ ಕೂತು ಮಾತಾಡು ಮಾತಾಡು ಎಂದು ತಿವಿಯುತಿದ್ದೆ. ಆದ್ರೆ ಡಬ್ಬಾ ನನ್ಮಗ ರಾಜೇಶ atleast ಹಾಯ್ ಎಂದು ಸಹಾ ಹೇಳಲಿಲ್ಲ, ಅವನ ಪಕ್ಕದ ಹುಡುಗಿಯನೊಮ್ಮೆ ನೋಡಿದೆ, ಅವಳಲ್ಲೂ ಏನೋ ಒಂದು ರೀತಿಯ ಕಾತುರ ಇತ್ತು. ಪಕ್ಕದಲ್ಲಿರುವನನ್ನು ಬಹಳ ದಿನಗಳಿಂದ ಬಲ್ಲಂತಹ ಒಂದು confidence ಆ ಹುಡುಗೀಲಿ ಇತ್ತು. ಆ ಹುಡುಗಿಯ ಕಾಲೇಜ್ ಸ್ಟಾಪ್ ಬಂತು ಅವಳ ಪಾಡಿಗೆ ಅವ್ಳು ಇಳಿದು ಹೋಗೇ ಬಿಟ್ಲು, ಹೋಗುವಾಗೊಮ್ಮೆ ರಾಜೇಶನ ಮುಖ ನೋಡಿ ಕಿಸಕ್ಕೆಂದುಕೊಂಡು ಹೋಗಿದ್ದು ಯಾರು ಗಮನಿಸಿಲ್ಲ ನನ್ನ ಬಿಟ್ಟು. ರಾಜೇಶ ತನ್ನಲ್ಲಿನ ಪ್ರೀತಿಯನ್ನು 40 ನಿಮಿಷ ಹುಡುಗೀನ ಪಕ್ಕದಲ್ಲಿ ಕೂಡ್ಸುದ್ರು ಹೇಳಕ್ಕಾಗಿಲ್ಲ

ಅದೂ ನಿಜಾನೆ ಬಿಡಿ ಪ್ರೀತಿ ಹೇಳ್ಕೊಳಕ್ಕೆ, ಹುಡುಗೀ ಪಕ್ಕದಲ್ಲಿದ್ರೂ 40 ನಿಮಿಷ ಅಲ್ಲ 40 ವರ್ಷ ಆದ್ರು ಕೆಲವೊಮ್ಮೆ ಆಗಲ್ಲ, ಒಂದು ರೀತಿಯ insecureness ಕಾಡುತ್ತೆ, ರಾಜೇಶಂಗೂ ಅದೇ ಆಯ್ತು,ಆ ಹುಡುಗಿ ಬೈದುಬಿಟ್ರೆ, ಬಸ್ಸಲ್ಲಿ ಎಲ್ರ ಮುಂದೆ ಅವಮಾನ ಮಾಡಿಬಿಟ್ರೆ, ಜಿಮ್ ಮುಗಿಸಿ ಬರೋವಾಗ ಸಿಗ್ತಿದ್ದ ಸ್ಮೈಲ್ ಮಿಸ್ ಆಗಿಬಿಟ್ರೆ, ನನ್ನ ಬಗ್ಗೆ ಕೆಟ್ಟದಾಗಿ ತಿಳ್ಕೊಂಡುಬಿಟ್ರೆ, ಹೀಗೆಲ್ಲ ಬಹಳಾ ಪ್ರಶ್ನೆಗಳು ರಾಜೇಶನ್ನ ಕಾಡಿಬಿಟ್ಟಿದ್ದವು, ಅದನ್ನೆಲ್ಲ ನನ್ನ ಬಳಿ ಹೇಳ್ಕೊಂಡು ಕಣ್ಣಲ್ಲಿ ಗಂಗೆಯ ತರಿಸಿಬಿಟ್ಟಿದ್ದ. ಈಗೇನು ಮಾಡೋದು ನೀನೆ ಹೇಳಪ್ಪ ನಿಧಾನ ಆದ್ರೆ ಆ ಹುಡುಗಿ ನಿಂಗೆ ಸಿಗಲ್ಲ, ಪ್ರೀತಿನ ಎದೆಯಲ್ಲಿ ಅವುಚಿಟ್ಟುಕೊಂಡಷ್ಟು ನಿಂಗೆ ಡೇಂಜರ್ ಅಂದೆ. ರಾಜೇಶನಿಗೆ ಏನು ಮಾಡಬೇಕು ಅನ್ನೋದು ಗೊತ್ತಾಗ್ತಿಲ್ಲ. ಕಡೇಗೆ ಹೇಳ್ದ, ಮಗಾ ನೀನೇನಾದ್ರು ಮಾಡು ನನ್ನ ಬಗ್ಗೆ ಅವಳ ಮನಸಿನಲ್ಲೇನಿದೆ ಅನ್ನೋದು ನಾನು ತಿಳಿಬೇಕು, ನಾನು ಕೆಟ್ಟವನಾಗಬಾರದು, ಅಕಸ್ಮಾತ್ ಅವಳು ನನ್ನ ಪ್ರೀತಿ ಒಪ್ಪದಿದ್ರು ಪರ್ವಾಗಿಲ್ಲ ನಾನು ಅವಳ ಮನಸಲ್ಲಿ ಒಳ್ಳೆಯವನಾಗಿರ್ಬೇಕು ಅಷ್ಟೆ ಅಂದ. ಡಬ್ಬಾ ನನ್ಮಗನೆ ಪ್ರೀತಿ ಉಳಿಸ್ಕೋಳೊ ಅಂದ್ರೆ ಏನೇನೋ ಪುರಾಣ ಹೇಳ್ತ್ಯಲ್ಲೋ ಅಂದು, ಏನಾದ್ರು ಪ್ಲಾನ್ ಮಾಡೋಣ ಬಿಡು ಅಂತ ಹೇಳಿ, ಪಂಚೆ ಮೇಷ್ಟ್ರ ಗಣಿತ ಕ್ಲಾಸ್ ಗೆ ಅರ್ಧ ಘಂಟೆ ಲೇಟಾಗಿ ಹೊರಟೆ.

ಸಂಜೆ ಕಾಲೇಜು ಬಿಡುವಷ್ಟರಲ್ಲಿ ನನ್ನ ತಲೇಗೆ ಒಂದು excellent ಅನ್ನಿಸುವಂತಹ ಐಡಿಯ ಹೊಳೆದಿತ್ತು. ಅಂದು ಕ್ರಿಕೆಟ್ ಆಡ್ಕೊಂಡು ರಾಜೇಶನ ಜೊತೆ ನಾನು ಜಿಮ್ ಗೆ ಹೋದೆ, ಮುಗಿಸಿ ಬರೀವಾಗ ಸೈಟ್ ಹೊಡೆಯಲು ನಾನು ಸಹ ರಾಜೇಶನ ಜೊತೆ ನಿಂತೆ, ಹುಡುಗಿ ಬಂದ್ಲು ಸ್ವಲ್ಪ ಹೊತ್ತು ನಿಂತ್ಲ್ಯ್ ಸ್ಮೈಲ್ ಕೊಟ್ಲು, ರಾಜೇಶ ನನ್ನ ಬಳಿ ಹೇಳಿಕೊಂಡಿದ್ದಕ್ಕಿಂತ ಹೆಚ್ಚಾಗೆ ಸ್ಮೈಲ್ ಕೊಟ್ಲು. ನಾನು ರಾಜೇಶನ ಪಕ್ಕ ನಿಂತು ಹಾಯ್ ಮಾಡಿದೆ, ಅವಳು ಹ್ಯಾಂಡ್ ವೇವ್ ಮಾಡಿದ್ಲು, ರಾಜೇಶನಿಗೆ ಖುಷಿಯೋ ಖುಷಿ, ನಂತರ ಒಂದು ಪೇಪರ್ರಿನಲ್ಲಿ tomorrow same bus same time but 3 seat ಎಂದು ಬರೆದು ಒಳಗೊಂದು ಕಲ್ಲು ಹಾಕಿ ಸುತ್ತಿ ಅವಳ ಬಳಿ ಎಸೆದೆ. ಮರು ಕ್ಷಣ ನಿಲ್ಲದೆ ಸೀದ ನಮ್ಮ ದಾರಿ ನಾವಿ ಹಿಡಿದೆವು.

ಮಾರನೆ ದಿನ ಬಂದ್ಲು ಎಲ್ಲವೂ ಅಂದುಕೊಂಡಂತಯೇ ಆಯ್ತು, ಮೂರು ಸೀಟು ಆದ್ರೆ ಈ ಸಲಿ ರಾಜೇಶ ಅಲ್ಲ ನಾನು ಪಕ್ಕದಲ್ಲಿ ಕೂತಿದ್ದೆ, ರಾಜೇಶ ಮೊದ್ಲೆ ಹೇಳಿದ್ದ, ತನ್ನ ಪ್ರೀತಿಯ ಬಗ್ಗೆ ತಿಳಿಸಬಾರದು ಅಂತ, ಬರೀ ತನ್ನ ಬಗೆಗಿನ ಅಭಿಪ್ರಾಯವಷ್ಟೆ ಸಾಕು, ನಾನು ಕೆಟ್ಟವನಾಗಬಾರದು ಅವಳ ಮುಂದೆ ಎಂಬೆಲ್ಲ ವೇದಾಂತವನ್ನು ಬಿಟ್ಟಿದ್ದ. ಸರಿ ನಿನ್ನ ವಿಷಯ ಮಾತಾಡಲ್ಲ ಎಂದು ಪಕ್ಕ ಕುಳಿತ ನಾನು ತಕ್ಷಣವೇ ಮಾತು ಶುರು ಮಾಡಿದ್ದೆ, ಹಾಯ್ ನಿಮ್ಮ ಹೆಸರು, ಏನು ಒದ್ತಾ ಇರೋದು, ನಿಮ್ಮ ಡ್ಯಾಡಿ ಏನ್ ಮಾಡ್ತಾರೆ ಹೀಗೆ ಮಾತಾಡ್ತ ಮಾತಾಡ್ತ, ನಾನು ನಿಮ್ಮನ್ನ ಪ್ರೀತಿಸ್ತಾ ಇದ್ದೀನಿ ಒಪ್ಪಿಗೆ ಇದ್ಯ ಅಂದೆ, ಹುಡುಗಿ ಒಂದು ಕ್ಷಣ ಶಾಕ್ ಆದ್ಲು ಪಕ್ಕದಲ್ಲಿ ರಾಜೇಶ ನನ್ನ ಮಾತನ್ನೇ ಕೇಳ್ತಾ ಇದ್ದೋನು ಗರ ಬಡಿದವನ ಹಾಗೆ ನನ್ನ ಮುಖ ನೋಡಿದ, ಮತ್ತೊಮ್ಮೆ ಕೇಳ್ದೆ, ನೀವು ನನ್ನ ಪ್ರೀತಿಸ್ತೀರ ಅಂತ, ಆ ಹುಡುಗಿ " ಅದೂ.. Actually, ನಿಮ್ಮ friend 3 years ಇಂದ ನಮ್ಮನೆ ಹತ್ರ ಬಂದು ನಿಲ್ತಿದ್ರು, ಅವ್ರು ನನ್ನ ಇಷ್ಟ ಪಡ್ತಿದ್ದಾರೆ ಅಂದ್ಕೊಂಡಿದ್ದೆ, ನಂಗೂ ಅವ್ರಂದ್ರೆ ಸ್ವಲ್ಪ ಇಷ್ಟ ಆಗಿತ್ತು. ನೀವು sudden ಆಗಿ ಬಂದು propose ಮಾಡ್ತಿರೋದು ನಂಗೆ ಏನು ಅರ್ಥ ಆಗ್ತಿಲ್ಲ " ಅಂದ್ಲು, ಅಬ್ಬ ಸದ್ಯ ನಿರಾಳ, ರಾಜೇಶ ಬಾ ಈಕಡೆ ಅಂತ ಸೀಟ್ ಚೇಂಜ್ ಮಾಡಿ ಎಲ್ಲ ವಿಷಯ ಹೇಳಿ, love success ಅಂದು ಬಿಟ್ಟಾಯ್ತು. ರಾಜೇಶ ಮತ್ತು ಆ ಹುಡುಗಿ ಇಬ್ಬರಲ್ಲು ಆ ಕ್ಷಣದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ, ಒಂದು ಲೆಕ್ಕದಲ್ಲಿ ಇಬ್ಬರಿಗೂ ಹೆರಿಗೆಯ ಸಂತಸ, ಇದು ಮೂರು ವರ್ಷದ ಬಸಿರು, ಪ್ರೀತಿಯ ಕೂಸು ಹುಟ್ಟಲು ಮೂರು ನಿಮಿಷ ಸಾಕಾಯ್ತು. ನನಗೂ ಪ್ರೇಮಿಗಳನ್ನು ಸೇರಿಸಿದ ಹೆಮ್ಮೆ..

ಮುಂದೆ ರಾಜೇಶ ಮತ್ತು ಆ ಹುಡುಗಿಯ ಪ್ರೀತಿ ಎರಡು ವರ್ಷ ಚೆನ್ನಾಗಿ ನಡೀತು, ಆಮೇಲೆ ಆ ಹುಡುಗಿ ಯಾರೋ ಬೇರೆಯವರನ್ನ ಮದುವೆ ಆದ್ಲು, ರಾಜೇಂಗೆ ಇನ್ನೂ ಮದ್ವೆ ಆಗಿಲ್ಲ, ಆಗಾಗ ಸಿಗ್ತಾ ಇರ್ತಾನೆ, ನಮ್ಮಿಬ್ಬರ ಮಾತಿನ ಮಧ್ಯೆ ಆ ಹುಡುಗಿಯ ಹೆಸರೂ ಬಂದು ಹೋತಿರುತ್ತದೆ.

ಅಂದಹಾಗೆ ಆ ಹುಡುಗಿ ಹೆಸರು ಏನು ಅಂತ ಮಾತ್ರ ಕೇಳ್ಬೇಡಿ....

ಪವನ್ ಪಾರುಪತ್ತೇದಾರ

Friday, April 5, 2013

ಪವನ್'s ಡೈರೀಸ್ - 4

ಒಮ್ಮೊಮ್ಮೆ ಒಂದು ಏಟು ನಮ್ಮ ಪೂರ್ತಿ ಅಹಂಕಾರವನ್ನೇ ಇಳಿಸಿಬಿಡುತ್ತೆ ಅನ್ನಿಸುತ್ತೆ. ಅಪ್ಪ ಕೊಡೋ ಏಟು, ಅಮ್ಮ ಕೊಡೋ ಏಟು, ಗೆಳೆಯನಿಗಾಗಿ ಇನ್ನ ಯಾರ ಹತ್ರಾನೋ ತಿನ್ನೋ ಏಟು, ಮೇಷ್ಟ್ರು ಕೊಡೋ ಏಟು, ಹೀಗೆ ಏಟುಗಳು ಮನುಷ್ಯನನ್ನ ಕಠಿಣವಾಗಿಸದೆ ಮೃದುವಾಗಿಸುವಂತಿದ್ದರೆ ಆ ಏಟುಗಳಿಗೆ ಮಹತ್ವ ಬಹಳಾನೆ ಬಂದುಬಿಡುತ್ತದೆ. ಇಂತಹದೇ ಒಂದು ಏಟು ನನ್ನನ್ನು ಒಬ್ಬ ಜವಾಬ್ದಾರಿಯೆತ ವ್ಯಕ್ತಿಯನ್ನಾಗಿ ಮಾಡಿದೆ. ಆದ್ರೆ ಆ ಏಟು ತಿಂದದ್ದು ಬೇರೆ ಯಾರಿಂದಲೋ ಅಲ್ಲ ಒಬ್ಬ ಪೋಲೀಸಣ್ಣನಿಂದ!!

ಬೆಂಗಳೂರಿನಲ್ಲಿ ದಿನದ ಪಾಸುಗಳ ಪರಿಚಯ ಹೊಸತು. ಯಾವನು ಸೈನ್ ಮಾಡುತ್ತಿರಲಿಲ್ಲ ಚೆಕ್ಕು ಸರಿಯಾಗಿ ಮಾಡುತ್ತಿರಲಿಲ್ಲ. ಪಾಸು ಬಳಸಿ ಊರೆಲ್ಲ ತಿರುಗಿ ಮತ್ತೆ ಊರು ಸೇರಿ ಎಳನೀರ ಅಂಗಡಿಯವನಿಗೆ ಕೊಟ್ರೆ 5 ರೂಪಾಯಿ ಕೊಡುತಿದ್ದ. ಮತ್ತದೇ ಪಾಸನ್ನು ಇನ್ನೊಬ್ಬರಿಗೆ 10 ರೂ ಗೆ ಮಾರುವುದನ್ನ ನನ್ನ ಕಣ್ಣಾರೆ ಬಹಳ ಸಲ ನೋಡಿದ್ದೀನಿ. ಆ ರೀತಿ 10 ಅಥವಾ 15 ರೂ ಕೊಟ್ಟು ಪಾಸು ಕೊಂಡವರಲ್ಲಿ ನಾನು ಸಹ ಒಬ್ಬ.

ಪಕ್ಕದೂರಿನ ಕೇಬಲ್ ರಮೇಶಣ್ಣನವರ ಮಗನಿಗೆ ಉಪನಯನ ಕಾರ್ಯಕ್ರಮ ರಾಗಿಗುಡ್ಡ ದೇವಸ್ಥಾನದ ಛತ್ರದಲ್ಲಿ ಆಯೋಜಿಸಲಾಗಿತ್ತು. ದಿನದ ಪಾಸಿನಲ್ಲೇ ಅಲ್ಲಿಯವರೆಗೆ ಪ್ರಯಾಣ ಮಾಡಿ ಗಡತ್ತಾಗಿ ತಿಂದು ಮನೆಗೆ ವಾಪಸ್ ಬರುವಾಗ ದಿನದ ಪಾಸಿರುವ ಗುಂಗಿನಲ್ಲಿ ಸಿಕ್ಕ ಸಿಕ್ಕ ಬಸ್ಸುಗಳನ್ನ ಹತ್ತಿ ಫುಟ್ ಬೋರ್ಡೀನ ಮೇಲೆ ಓಲಾಡುತ ಮನೆಗೆ ಹೊರಟಿದ್ದೆ. ಆಗೆಲ್ಲ ಸ್ವಲ್ಪ ಸಹವಾಸ ಜೋರಾಗೆ ಇತ್ತು ಬಿಡಿ, ಕಂಡಕ್ಟರಿಗಿಂತ ನಾನೆ ಹೆಚ್ಚು ಡ್ಯೂಟಿ ಮಾಡ್ತಿದ್ದೆ. ನನಗಿಂತ ಕೆಳಗಿನ ಮೆಟ್ಟಿಲಲ್ಲಿ ನಿಂತವರಿಗೆ ಆವಾಸ್ ಹಾಕಿ ಒಳಗೆ ಕಳ್ಸೋದು,ಕಾಲರ್ ಮೇಲಕ್ಕೆತ್ತಿಕೊಂಡು ಕೈಗೆ ತಾಮ್ರದ ಬಳೆ ಜೊತೆಗೊಂದಷ್ಟು ಕಲರ್ ಕಲರ್ ದಾರಗಳು, ಕತ್ತಿಗೆ ಮಣಿ ಸರ, ಕೈಗೊಂದು ಮಣಿಸರ, ಕಾಲರ್ ಮೇಲೆ ಕೆಂಪು ಬಣ್ಣದ ಕರ್ಚೀಪು, ಅಬ್ಬಬ್ಬ ನನ್ ಲುಕ್ಕೇ ಒಂತರ ವಿಚಿತ್ರವಾಗಿರ್ತಿತ್ತು.ಯಾವ್ದಾದ್ರು ಕಾಲ್ ಬಂದ್ರೆ ಏನೋ ಮಚ್ಚ, ಅಡ್ಡದಲ್ಲಿ ಸಿಕ್ಕಣ ಬಿಡು, ಆ ನನ್ ಮಗನಿಗೆ ಸರ್ಯಾಗಯ್ತೆ ಅಂತೆಲ್ಲ ಬರೀ ಶೋಕಿ ಮಾತುಗಳು.

ಹೀಗೆ ಬಸ್ಸಿನಿಂದ ಬಸ್ಸಿಗೆ ಎಗರಾಡ್ತ ಯಾವ್ದೊ ಒಂದು ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತಿದ್ದೆ. ಬಂದ ಕಂಡಕ್ಟರ್ ಟಿಕೆಟ್ ಟಿಕೆಟ್ ಅಂದ, ಪಾಪ ಉತ್ತರ ಕರ್ನಾಟಕದವನು, ಪಾಸ್ ಅಂದೆ, ತೋರಿಸ್ರಿ ಅಂದ, ಸ್ಟೈಲ್ ಆಗಿ ಪಾಸ್ ಎತ್ತಿ ಅವನ ಕೈಗಿಟ್ಟೆ, ಸರಿ ಒಳಗ್ ಬಾರೋ ಡೋರ್ ನಾಗ ಎದಕ್ ಸಾಯ್ತಿದ್ದಿ ಅಂದ. ಯಾಕೋ ಅವನ ಏಕವಚನ ನನ್ನ ಬಿಲ್ಡಪ್ಪಿಗೆ ಅಹಂಕಾರಕ್ಕೆ ಸರಿ ಅನ್ಸಿಲ್ಲ. ನಂಗಿಂತ ಸುಮಾರು 10 ವರ್ಷ ದೊಡ್ಡ ವ್ಯಕ್ತಿ ಇರ್ಬೋದು, ಯಾವನಿಗೆ ಬಾರೋ ಹೋಗೋ ಅಂತ್ಯ ಅಂತ ಮೇಲೆ ಹತ್ತಿ ಬಂದು ತಳ್ಳೇಬಿಟ್ಟೆ. ಸ್ವಲ್ಪ ಹಿಂದೆ ಸರಿದವ್ನೆ ನನ್ನೇ ಹೊಡ್ಯಾಕ್ ಬರ್ತೀ, ಅಂತ ಕೈ ಎತ್ತಲು ಹೋದ ಅಷ್ಟರಲ್ಲಿ ಎಲ್ಲಿತ್ತೋ ಆವೇಶ ಮುಷ್ಟಿ ಮಾಡಿ ಒಂದು ಏಟು ಮೂತಿಗೆ ಕೊಟ್ಟುಬಿಟ್ಟಿದ್ದೆ. ಯಪ್ಪೋ ನನ್ನ ಕೊಂದು ಬಿಡ್ತಾನೋ ಅಂತ ಕಿರುಚಿ ಬಸ್ಸು ನಿಲ್ಸಿಬಿಟ್ಟ. ನನಗೆ ದಿಕ್ಕೇ ತೋಚದಂತಾಯಿತು, ಭಯದಿಂದ ತಟಸ್ಥನಾಗಿ ನಿಂತುಬಿಟ್ಟೆ. ಮುಂದೆಯಿಂದ ಯಾರೋ ಬಂದಂಗಾಯಿತು. ಬಂದ ಬಂದವರೇ ನನ್ನ ಕಪಾಳಕ್ಕೆ ಛಿಟೀರ್ ಎಂದು ಬಿಟ್ಟಿದ್ದರು. ಒಂದು ಕ್ಷಣ ಸಾವಿನ ಮನೆಯಲ್ಲಿನಂತಹ ಮೌನ, ಕಿವಿಯಲ್ಲಿ ಕುಯ್ಯ್ಯ ಎಂಬ ತಂತಿಯ ನಾದ. ನಿಂತ ಜಾಗದಲ್ಲೇ ಕುಸಿದು ಕುಂತುಬಿಟ್ಟೆ.

ಅಷ್ಟರಲ್ಲೇ ಒಂದಷ್ಟು ಜನ ತಿರುಗಿಸ್ರೀ ಸ್ಟೇಷನ್ ಗೆ ಬಸ್ಸು ಅಂದ್ರು, ನನ್ನ ಹೊಡೆದಾತ, ಓಯ್ ಯಾವೂರೋ ಅಂದ ಸಾರ್ ಆನೇಕಲ್ಲು ಸಾರ್ ಅಂದೆ. ಏನ್ ಮಾಡ್ತಿದ್ಯ ಅಂದ, ಸಾರ್ ಇಂಜಿನಿಯರಿಂಗ್ ಓದ್ತಾ ಇದ್ದೀನಿ ಸಾರ್ ಅಂದೆ. ಏನೋ ನಿಂದು ಅವತಾರ? ರೌಡಿ ಏನೋ ನೀನು? ಏನಿದು ಕೈಗೆ ಅಷ್ಟೊಂದು ದಾರ, ಮಣಿ, ಕತ್ತಿಗೆ ಮಣಿ ಸರ, ತಾಮ್ರದ ಕಡಗ ಎಲ್ಲ ಅಂದ. ಸಾರ್ ಎಲ್ಲ ದೇವ್ರುದು ಸಾರ್ ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಂದೆ. ಓದೋ ಹುಡುಗ ಇಂತಾ ಶೋಕಿಗಳೆಲ್ಲ ಮಾಡ್ತಿದ್ಯಲ್ಲ ನಾಚಿಕೆ ಆಗಲ್ವ ಅಂದ. ಸಾರಿ ಸಾರ್ ತಪ್ಪಾಯ್ತು ಅಂದೆ. ಅಷ್ಟರಲ್ಲೇ ಯಾರೋ ಸಾರ್ ಇಂತವ್ರನ್ನೆಲ್ಲ ಪೋಲೀಸ್ನೋರಿಗೆ ಹಿಡ್ಕೊಡ್ಬೇಕು ಸಾರ್, ಗವರ್ನಮೆಂಟ್ official ಮೇಲೆ ಕೈ ಮಾಡಿದ್ದಾನೆ ಅಂದ್ರು. ಆಗ ನನ್ನ ಹೊಡೆದ ವ್ಯಕ್ತಿ,ಅಲ್ರೀ ಆ ಹುಡುಗ ಫುಟ್ ಬೋರ್ಡ್ ಮೇಲೆ ನಿಂತಿದ್ದಾಗ ಮಾತಾಡಿಲ್ಲ, ಕಂಡಕ್ಟರ್ ಜೊತೆ ಸುಮ್ ಸುಮ್ನೆ ಜಗಳ ಆಡಿದಾಗ ಮಾತಾಡಿಲ್ಲ, ಈಗ ಬಂತೇನ್ರಿ ನಿಮ್ಮ ಧ್ವನಿ, ಹೋಗಿ ಕೆಲ್ಸ ನೋಡ್ಕೋಳ್ರಿ ಅಂತ ಬೈದ, ನಂತರ ಮುಂದಿನ ಸ್ಟಾಪಲ್ಲಿ ಇಳಿದ. ಸ್ಟಾಪಿನ ಬಳಿಯಲ್ಲೇ ಇದ್ದ ಪೋಲೀಸ್ ಸ್ಟೇಷನ್ ಕಡೆ ಹೋಗುತಿದ್ದಾಗ ಆತನ ಕಾಕಿ ಪ್ಯಾಂಟು ಮತ್ತು ಕನ್ನಡಕದಿಂದ ಗಮನಕ್ಕೆ ಬಂತು ಆತ ಸಹ ಪೋಲೀಸಣ್ಣನೇ ಅಂತ.
ಅವತ್ತು ನನಗೆ ಏಟು ಕೊಡದಿದ್ದರೆ, ಅಥವಾ ಸ್ಟೇಷನ್ನಿಗೆ ಒಯ್ದಿದ್ದರೆ, ನಾನಿಂದು ನಿಮ್ಮ ಮುಂದೆ ಬರೆಯಲಾಗುತ್ತಿರಲಿಲ್ಲ.

ಪವನ್ ಪಾರುಪತ್ತೇದಾರ

ಪವನ್'s ಡೈರೀಸ್ - 3

ಡಿಪ್ಲೋಮಾ ಸಮಯ. ಹುಡುಗೀರು ಮೊದಲನೇ ಬೆಂಚು ನಂತರದ ಎರಡು ಬೆಂಚು ಖಾಲಿ ಅಮೇಲೆ ಹುಡುಗ್ರು ಇದು ನಮ್ ಕ್ಲಾಸಿನ ಕೂತ್ಕೋಳೋ ಆರ್ಡರ್. ಕಾಲೇಜಿಗೆ ಸೇರಿ ಸುಮಾರು 6 ತಿಂಗಳಾಯ್ತು ಮೊದಲನೇ ಸೆಮಿಸ್ಟೆರ್ ಮುಗಿದಿತ್ತು. introduction ಕ್ಲಾಸ್ ಆದ್ಮೇಲೆ ಒಮ್ಮೆ ಸಹ ಅವ್ರ ಹೆಸರು ಕ್ಲಾಸಲ್ಲಿ ಅಟ್ಟೆಂಡನ್ಸ್ ಹಾಕೋವಾಗ ಗಂಡು ಮೇಷ್ಟ್ರ ಬಾಯಲ್ಲಿ ಬಿಟ್ಟು ಒಬ್ಬ ಹುಡುಗನ ಬಾಯಲ್ಲೂ ಕೇಳಿಲ್ಲ.ಅದೇ ನಾವ್ ನಾವೆ ಹುಡುಗ್ರು ಇದ್ದಾಗ ಮಾತ್ರ ಮಗ ಅವ್ಳುನ ಅವರಪ್ಪ ಕಾಲೇಜ್ ಹತ್ರ ಡ್ರಾಪ್ ಮಾಡೋದು ನೋಡಿದೆ. ಮಗಾ ಇವ್ಳು ಸ್ನೇಹಾ ಇದ್ದಾಳಲ್ಲ ಅವ್ಳಿಗೆ ಡವ್ ಇದ್ದಾನಂತೆ, ಇಂತ ಮಾತುಗಳೆಲ್ಲ ಆಡ್ತಾ ಇದ್ವಿ.
ನಂಗೂ ಇವೆಲ್ಲ ನೋಡಿ ನೋಡಿ ತಲೆ ಕೆಟ್ಟುಹೋಗಿತ್ತು. ಅದೇನೆ ಆಗ್ಲಿ ಇವತ್ತು ಆ ಹುಡುಗೀರ ಜೊತೆ ಮಾತಾಡೆ ಆಡ್ತೀನಿ ಮಗಾ ಕ್ಯಾಟು ಅಂತ ಪಕ್ಕದಲ್ಲಿ ಕೂತಿದ್ದ ಕ್ಯಾಟ್ ವೆಂಕಿ ತೊಡೆ ಮೇಲೆ ಛಿಟೀರ್ ಅಂತ ಬಿಟ್ಟಿದ್ದೆ. ಅದಕ್ಕವ್ನು ಮಗಾ ಮೀಟರ್ ಇದ್ರೆ ಮಾತಾಡೋ ನೋಡೋಣ ರಾಘವೇಂದ್ರ ಭವನ್ ಮಸಾಲೆ ದೋಸೆ ಚಿತ್ರಾನ್ನ ಕೊಡುಸ್ತೀನಿ ಅಂದಿದ್ದ. ದೋಸೆ ಚಿತ್ರಾನ್ನ ನನ್ನ ಸೀದ ಖಾಲಿ ಇದ್ದ ಹುಡುಗಿಯರ ಹಿಂದಿನ ಎರಡನೆ ಬೆಂಚಿಗೆ ಕರ್ಕೊಂಡೋಗಿ ಕೂಡಿಸಿತ್ತು.

ಸಿನ ಬೇರೆ ಹುಡುಗ್ರುಗೆಲ್ಲ ಗಲಿಬಿಲಿ. ಮೇಷ್ಟ್ರು ಬಂದು ನೋಡಿದವ್ರೆ ಆಶ್ಚರ್ಯದಿಂದ ಒಂದು ತುಂಟ ನಗು ಕೂಡ ಕೊಟ್ರು. ಕ್ಲಾಸ್ ಪಾಡಿಗೆ ಕ್ಲಾಸ್ ನಡೀತಿತ್ತು ನನ್ನ ಮಾತಾಡ್ಸೋ ಸ್ಕೆಚ್ ನಾನು ಮಾಡ್ತಾ ಇದ್ದೆ. ನಾನೊಬ್ಬನೆ ಎರಡನೆ ಬೆಂಚು ಮುಂದೆ ಐದು ಹುಡುಗೀರು ಅವ್ರಿಗೂ ಒಂಥರ ಸಡಗರ ಒಂಥರ ಭಯ, ಈ ನನ್ಮಗ ಏನಕ್ಕೆ ಹಿಂದೆ ಬಂದು ಕೂತ ಅಂತ. ಕ್ಲಾಸ್ ನಡೀತಾ ಇರೋವಾಗ್ಲೆ ಎರಡು ಸಾರಿ ಸ್ಕೇಲನ್ನು ಮುಂದೆ ಬೆಂಚಿನ ಬಳಿ ಬೀಳಿಸಿದೆ. ಕೊನೆಯಲ್ಲಿ ಕೂತಿದ್ದ ರಶ್ಮಿ ಗಮನಾನೆ ಕೊಡ್ಲಿಲ್ಲ, ಅಲಾ ಇವ್ಳಾ ಏನ್ ಮಾಡೋದು ಅಂದುಕೊಳ್ಳೋ ಅಷ್ಟ್ರಲ್ಲೆ, ಅವಳ ಪಕ್ಕ ಕೂತಿದ್ದ ದಿವ್ಯ ಹೇ ರಶ್ಮಿ ನಿನ್ ಪಕ್ಕ ಸ್ಕೇಲ್ ಬಿದ್ದಿದೆ ಎತ್ಕೊಡೆ ಅಂದ್ಲು, ಅವ್ಳು ಅದನ್ನ ನೋಡಿ ಬೇಕಾದ್ರೆ ಅವ್ನೆ ಕೇಳ್ತಾನೆ ಬಿಡೆ ಅಂದುಬಿಟ್ಲು. ಸಿಕ್ಕಿದ್ದೇ ಛಾನ್ಸು ಅಂತ ರಶ್ಮಿ ಅವರೆ ಸ್ಕೇಲ್ ತೆಗೆದು ಕೊಡ್ತೀರ ಅಂದೆ ಮರ್ಯಾದೆ ಇಂದ, ಸ್ಕೇಲ್ ತೆಗೆದು ಕೈಲಿಟ್ಟು ಇಂಥಾ ಮರ್ಯಾದೆ ಎಲ್ಲ ಬೇಡ್ವೋ ರಶ್ಮಿ ಅಂದ್ರೆ ಸಾಕು ಅಂದ್ಲು. ಸಿಕ್ಕಿದ್ದೆ ಛಾನ್ಸು ಮತ್ತೆ ಸ್ಕೇಲ್ ಬಿಸಾಕ್ದೆ, ಹೇ ರಶ್ಮಿ ಸ್ಕೇಲ್ ತೆಕ್ಕೊಡೆ ಅಂದೆ. ಮತ್ತೆ ತೆಕ್ಕೊಟ್ಲು ಹಾಗೆ ಶುರುವಾಗಿದ್ದು ಅವತ್ತಿನ ಕೊನೆ ಅಷ್ಟರಲ್ಲಿ ಫೋನ್ ನಂಬರ್ exchange ಕೂಡ ಆಗೋಯ್ತು, ಮೆಸೇಜುಗಳು ಶುರು ಆಗೋಯ್ತು.

ಆದ್ರೆ ಕಾಲೇಜಲ್ಲಿ ಎಲ್ಲ ಓಕೆ ಆದ್ರೆ ಮನೆ ರೀಚ್ ಆದ್ಮೇಲು ಕಾಲ್ ಅಂಡ್ ಮೆಸೇಜುಗಳು, ಅಲ್ಲೇ ಆಗಿದ್ದು ಎಡವಟ್ಟು.ಮೊದಲೇ ಆಗೆಲ್ಲ ನಮ್ಮ network providers ಛಾಲೆಂಜ್ ಮೇಲೆ ಬಿಟ್ಟಿ ಮೆಸೇಜುಗಳು ಕೊಡ್ತಾ ಇದ್ರು ಎಲ್ಲ ಹುಡುಗ ಹುಡುಗೀರ್ನ ಹಾಳು ಮಾಡಕ್ಕೆ, ಅದೇ ಹಳ್ಳಕ್ಕೆ ನಾನು ಬಿದ್ದಿದ್ದೆ, ದಿನಾ ಮೆಸೇಜು ಮೆಸೇಜು ಮೆಸೇಜು. ಕಾಲ್ ಮಾಡೋದು ಇಲ್ವೇ ಇಲ್ಲ ಬರೀ ಮೆಸೇಜು, ಕಾಲ್ ಮಾಡೆ ಅಂದ್ರೆ ಏನೋ ಒಂದು ನೆಪ, ಮೆಸೇಜಲ್ಲೇ ಮಾತಾಡು ಅಂತ. ಪ್ರಾಬ್ಲಮ್ ಏನಂದ್ರೆ ಮೆಸೇಜಲ್ಲಿ ಕಾಲೇಜ್ ಬಗ್ಗೆ ಮಾತೆ ಇಲ್ಲ, ನೋಟ್ಸ್ ರೆಕಾರ್ಡ್ ಅಂದ್ರೆ ಅವೆಲ್ಲ ಏನಕ್ಕೆ ಈಗ ಅಂತ ಬೇರೆ. ಕಾಲೇಜಲ್ಲಿ ಮಾತ್ರ ಸಿಕ್ಕಾಗ ನೋಟ್ಸು ರೆಕಾರ್ಡ್ ಇವೆಲ್ಲ. ಒಂದು ಘಂಟೆ ಅಕಸ್ಮಾತ್ ಒಂದೂ ಮೆಸೇಜ್ ಮಾಡದೆ ಇದ್ರೆ ಘನಘೋರ ಅಪರಾಧ ಮತ್ತೆ ಜಗಳ. ಎಲ್ಲವೂ ಅಯೋಮಯವಾಗಿರಬೇಕಾದ್ರೆನೆ ಒಂದು ಸಲಿ ರಶ್ಮಿನ ಕೇಳಿಬಿಟ್ಟೆ, ಯಾಕೆ ಮನೇಲಿರಬೇಕಾದ್ರೆ ಕಾಲ್ ಮಾಡಿದ್ರೆ ರಿಸೀವೆ ಮಾಡಲ್ಲ ಮಾತಾಡಲ್ಲ ಅಂತ, ಒಂದು ಕ್ಷಣ ಶಾಕ್ ಆದಂತಾಗಿ ಏನು ಕಾಲಾ ಅಂದ್ಲು ! ಹೌದು ಮೆಸೇಜ್ ಮಾತ್ರ ಮಾಡ್ತಾ ಇರ್ತ್ಯಾ ಕಾಲ್ ಮಾಡಿದ್ರೆ ರಿಸೀವ್ ಮಾಡಲ್ಲ ಅಂದೆ, ತಕ್ಷಣ ಯಾವ ನಂಬರ್ ಗೆ ಅಂದ್ಲು ಅದಕ್ಕೆ ನಾನು ಅದೆ ಆವತ್ತು ನೀನು ಕೊಟ್ಟಿದ್ಯಲ್ಲ ಆ ನಂಬರ್ ಗೆ ಅಂದೆ.

ಒಂದು ಕ್ಷಣ ಏನೋ ಒಂದು ರೀತಿಯ ಅವಘಡವಾದಂತೆ ಸುಮ್ಮನಿದ್ದು, ಅದು ನಮಕ್ಕನ ನಂಬರ್, ಅವತ್ತು ಒಂದು ದಿನ ಕಾಲೇಜಿಗೆ ಮೊಬೈಲ್ ತಂದಿದ್ದೆ so ಕೊಟ್ಟೆ, ಆಮೇಲೆ ನಮಕ್ಕಂಗೂ ಹೇಳಿದ್ದೆ ನನ್ friend ಮೆಸೇಜ್ ಮಾಡಿದ್ರೆ ಕಾಲ್ ಮಾಡಿದ್ರೆ ಹೇಳು ಅಂತ, ಆದ್ರೆ ಅವ್ಳು ನಂಗೆ ಈ ವಿಷಯದ ಬಗ್ಗೆ ಯಾವತ್ತು ಒಂದು ವಿಷಯಾನು ಹೇಳಿಲ್ಲ ಅಂದ್ಲು.
ನನಗೇ ಅರಿವಿಲ್ಲದಂತೆ ನಾನು ಯಾವುದೋ ವ್ಯೂಹದಲ್ಲಿ ಬಂಧಿಯಾದಂತೆ ಅನಿಸಿತು, ಅಂದು ಕಾಲೇಜು ಮುಗಿಸಿ ಹೊರಟ ರಶ್ಮಿ ಅವರ ಅಕ್ಕನ ಬಳಿ ಈ ವಿಷಯ ಎಲ್ಲ ವಿಚಾರಿಸಿದ್ದಾಳೆ, ಅವರಕ್ಕ ನನ್ನ ಮೆಸೇಜುಗಳನ್ನು ಬಿಟ್ಟು ಇರಲಾಗದ ಪರಿಸ್ಥಿತಿ ತಲುಪಿ ಬಿಟ್ಟಿದ್ದಾಳೆ, ಇದರಿಂದ ರಶ್ಮಿ ಮನನೊಂದು ನನ್ನೊಡನೆ ಮಾತೇ ಬಿಟ್ಟಿದ್ದಳು, ಅವಳ ಆ ಪರಿಸ್ಥಿತಿಯನ್ನು ನನಗೆ ಮತ್ತೊಬ್ಬ ಗೆಳತಿ ವಿವರಿಸಿದ್ದಳು. ದಾರಿ ಕಾಣದೆ ನನ್ನ ಸಿಮ್ ಕಾರ್ಡನ್ನು deactivate ಮಾಡಿಸಿಬಿಟ್ಟೆ, ಆಮೇಲೆ ಸ್ವಲ್ಪ ದಿನಗಳ ನಂತರ ರಶ್ಮಿ ನಾರ್ಮಲ್ ಆದ್ಲು, ಅವರಕ್ಕ ಏನಾದ್ಲೋ ಗೊತ್ತಿಲ್ಲ. ಮುಂದಿನ ನನ್ನ ಡಿಪ್ಲೋಮಾ ಬದುಕಿನಲ್ಲಿ ಎಂದೂ ರಶ್ಮಿಯ ಅಕ್ಕನ ಕುರುತು ಮಾತನಾಡಲಿಲ್ಲ.

ಇತ್ತೀಚೆಗೆ ಅವಳು ಸಪ್ತಪದಿ ತುಳಿದಳಂತೆ ರಶ್ಮಿ ಕರೆದಿದ್ದಳು, ನಾ ಹೋಗಿಲ್ಲ....

ಮಾತುಗಳು ಮುಗಿದವೆ??

ನೆನ್ನೆ ಮೊನ್ನೆಯವರೆಗೂ ಹೀಗಿರಲಿಲ್ಲ
ನೀ ಕೊಟ್ಟ ಮೊಬೈಲ್ ಫೋನು
ಕಿವಿಗೆ ಕಿಸ್ಸು ಕೊಡುವುದ ನಿಲ್ಲಿಸಿರಲಿಲ್ಲ
ಹುಚ್ಚನಂತೆ ಕಿವಿಗೆ ಹೆಡ್ಸೆಟ್ಟು ತಗುಲಿಸಿಕೊಂಡು
ರೋಡಲಿ ಇದ್ದಕ್ಕಿದ್ದಂತೆ ನಗುವ ಘೀಳು
ಸ್ವಲ್ಪವೂ ಕಮ್ಮಿಯಾಗಿರಲಿಲ್ಲ
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಬೀಪ್ ನಾದ ಮೊಬೈಲಿನಿಂದ ಹೊಮ್ಮಿದಾಗೆಲ್ಲ
ಎದೆಬಡಿತಕ್ಕೂ ಕ್ಷಣ ನಿಂತು ಓದುವ ಕಾತುರ
ನಿನ್ನ ಸಂದೇಶ ಬಂದಿರಬಹುದೆಂದು
ನಿನ್ನ ಸಂದೇಶವಲ್ಲವೆಂದೊಡನೆ
ನಿನಗಾಗಿ ಕಾಯುವ ಉಸಿರ ಉಳಿಸುವ ಕೆಲಸ
ಮೊದಲು ಹೀಗಿರಲಿಲ್ಲ
ಉಚಿತ ಸಂದೇಶದ ಮಿತಿ ಅರಿವು ಇರುತಿರಲಿಲ್ಲ
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಇಂದು ಮಾತಿಗಿಳಿದರೆ ಮೌನದ್ದೇ ಪಾರುಪತ್ಯ
ಇನ್ನೇನು ಸಮಾಚಾರ ಎಂಬ ಒಕ್ಕಣೆ ಬೇರೆ
ಸುಮ್ಮನಿದ್ದರೂ ಇರಲಾಗದ ಮನಸ್ಥಿತಿ
ಕರೆಯಲಿದ್ದರೂ ಮಾತು ಇಲ್ಲದ ಪರಿಸ್ಥಿತಿ
ಮೊದಲು ಹೀಗಿರಲಿಲ್ಲ ಮಾತಿನ ಮಹಲಿಗೆ
ಮೆಟ್ಟಿಲೇ ಹತ್ತದೆ ಮಹಡಿ ಮೇಲಿರುತ್ತಿದ್ದೆವು
ಇಂದ್ಯಾಕೋ ಅನಿಸುತಿದೆ
ನಮ್ಮೊಳಗಿನ ಮಾತುಗಳು ಮುಗಿದವೆ?

ಮಾತು ಮುಗಿದರೇನಂತೆ
ನಾಲಿಗೆಗೆ ಸ್ವಲ್ಪ ಬ್ರೇಕು ಸಿಕ್ಕಂತಾಯ್ತು
ಮನಸಿಗೆ ಮಾತೇಕೆ ಬೇಕು ಪ್ರೀತಿ ಇರುವಾಗ
ಮೌನದಲೇ ಮತ್ತಷ್ಟು ಮಗುದಷ್ಟು ಪ್ರೀತಿಸುವ
ಮಾತಿಗಿಂತಲೂ ಮೌನಕ್ಕೆ ಬೆಲೆ ಹೆಚ್ಚು
ನಮ್ಮೊಳಗಿನ ಮಾತುಗಳು ಮುಗಿದಿರಬಹುದು
ಮೌನದಲೇ ನಿನಗೊಂದು ಮಾತ ಹೇಳುವೆ ಕೇಳು
ಈ ಪ್ರೀತಿಯೆಂದಿಗೂ ಮುಗಿಯದೇ ಗೆಳೆತಿ
ಈ ಪ್ರೀತಿಯೆಂದಿಗೂ ಮುಗಿಯದೇ ಗೆಳೆತಿ

ಪವನ್ ಪಾರುಪತ್ತೇದಾರ

ರವಿ ಅಣ್ಣನ ನೆನಪಿಗಾಗಿ

ಹೇಳದೇ ಅಸ್ತಮಿಸಿದ ಮೂರ್ನಾಡಿನ ಸೂರ್ಯ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬಡತನದ ಬಾಧೆಗೆ ಮುಲಾಮು ಹುಡುಕುತ
ತನ್ನವರ ಜೀವನಕೆ ಬೆಳಕನ್ನು ತರಲು
ಕೂತಿದ್ದ ಅಷ್ಟೆ ದೂರದ ಕ್ಯಾಮೊರಾನಿನಲ್ಲಿ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ಬೆಳಕಾಗಿದ್ದ ಆ ಸೂರ್ಯ ಹಲವಾರು ಕವಿಗಳಿಗೆ
ತನ್ನ ಪ್ರಖರ ಸಾಹಿತ್ಯದ ಶಾಖದ ಪಾಲನ್ನು ನೀಡಿ
ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಮೆರುಗು ನೀಡಿ
ಸರಿ ತಪ್ಪುಗಳನು ತಿದ್ದುವ ಗುರುವಾಗಿದ್ದ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಸುಸ್ತಾಗಿರಲಿಲ್ಲ ಸೂರ್ಯನಿಗೆ
ದೂರ ಇದ್ದಕ್ಕೆ ಅವಮಾನ ಬಹಳಷ್ಟು ಸಹಿಸಿದ್ದ
ಒರಟು ನಾಲಿಗೆಗಳಿಗೆ ಆಹಾರವಾಗಿದ್ದ
ಯಾರಿಗೂ ಹೇಳದೆ ಕೊಡುಗೆ ಕೊಡುತಿದ್ದ
ಬರಹಗಾರರ ಬೆಳೆಸುತ ಸಾಹಿತ್ಯ ಸೇವೆಗೆ
ಇಂದು ಅಸ್ತಮಿಸಿಬಿಟ್ಟಿದ್ದಾನೆ
ಯಾರಿಗೂ ಹೇಳದೆ ನಿರ್ಲಿಪ್ತನಾಗಿ

ಪವನ್ ಪಾರುಪತ್ತೇದಾರ..