Thursday, October 4, 2012

ಅಂಚೆಯ ಮೆಲುಕು

ತಾತನಿಗಾಗಲೆ ಬಹಳ ಹೆಸರು
ವಾರಕ್ಕೆರಡಾದರು ಅಂಚೆ ಬರುತಿತ್ತು
ಪಟೇಲ್ ಇಸ್ಮಾಯಿಲರೊಡನಾಡಿದ್ದ ಜೀವ
ಅಂಚೆಯಣ್ಣ ರಸ್ತೆಗೆ ಬಂದನೆಂದರೆ ಸಾಕು
ಬೀದಿ ಹುಡುಗರೆಲ್ಲ ಹೋ ಎಂದು ಹಿಂದೆ

ಅಂಚೆಯಣ್ಣನಿಗೋ ಭಯವೆಂದರೆ ಭಯ
ಮೂಟೆಯಿಂದೇನಾದರು ಪತ್ರ ಮಾಯವಾದೀತೆಂದು
ಮಕ್ಕಳ ಮೇಲೆಲ್ಲ ಹೌಹಾರಿ ಕಿರುಚುತ
ತಂದುಕೊಡುತಿದ್ದ ತಾತನಿಗಂಚೆ

ಜಗುಲಿ ಮೇಲೆಯೆ ಕುಳಿತಿದ್ದ ತಾತನಿಗೆ
ಅಂಚೆ ಬಂದೊಡನೆ ಎನೇನೋ ತಳಮಳ
ಮೈಸೂರಿನಿಂದ ಮಗನು ಬರೆದಾನೋ
ಹೈದರಾಬಾದಿಂದ ಗೆಳೆಯ ಬರೆದಾನೋ
ಹೆಮ್ಮೆಯಿಂದಲಿ ತಾತ ಒಡೆದು ಓದಲೇನೋ ಚೆನ್ನ

ಮೊದಲ ಸಾಲಲ್ಲೆ ಬರೆದವರ ಕ್ಷೇಮ
ಎರಡನೆ ಸಾಲಲ್ಲಿ ಓದುವವರ ಕ್ಷೇಮ
ಮುಂದೆ ಒಂದಷ್ಟು ವಿಷಯ ಆಪ್ಯಾಯತೆ
ಕೊನೆಯಲ್ಲಿ ಮಕ್ಕಳಿಗೆ ಆಶೀರ್ವಾದಗಳು
ದೂರದಲ್ಲಿದ್ದರೂ ಪ್ರೀತಿಗಿಲ್ಲ ಕೊರತೆ

ತಾತ ಬರುವರು ಈಗ ತಿಥಿಯಂದು ಮಾತ್ರ
ಅಂಚೆ ಕೂಡ ಕೇವಲ ನೋಟೀಸಿಗಷ್ಟೆ ಸೀಮಿತ
ಬೀದಿ ಮಕ್ಕಳಲ್ಲಿ ಹುಮ್ಮಸ್ಸೆ ಇಲ್ಲ
ಅಂಚೆಯಣ್ಣ ಇರಲಿ ಲಗೋರಿ ಆಡಲು ಕೂಡ
ಮಿಂಚೆಯಲ್ಲೀಗ ಮರೆಯಾಗಿದೆ ಕ್ಷೇಮ
ನೀವು ಕ್ಷೇಮ ಎಂದು ಭಾವಿಸುವ ಬಂಧಗಳ ಕೊರತೆ

No comments:

Post a Comment