Thursday, December 29, 2011

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ

ಮನವ ಕಲಕುವ ಬೇಸರ ಏಕೆ ನೀಡಿದೆ ಗೆಳೆಯ
ಜೊತೆಯಲ್ಲಿ ಬಿದ್ದು ಜೊತೆಯಲ್ಲಿ ಎದ್ದು
ಜಂಗುಳಿಯ ನಡುವೆ ನಮ್ಮದೇ ಸದ್ದು
ನಿನ್ನ ಅಂದಿನ ಮಾತು ಇನ್ನೂ ಗುನುಗುನಿಸುತಿದೆ
ಆ ಮಾತು ಸುಳ್ಳೆಂದು ಲೋಕ ಹಂಗಿಸುತಿದೆ
 
ಹೋಗನೆಂದೆ ದೂರ ನನ್ನ ಸ್ನೇಹವ ಬಿಟ್ಟು
ಹಣದ ದಾಹಕ್ಕೆ ಸಾಗರವ ದಾಟಿ ಹೋದೆ
ಹೇಳಿದ್ದೆ ಬಹಳಷ್ಟು ನಿನ್ನ ಬಳಿ ಗುಟ್ಟು 
ಮತ್ತೆ ಕೇಳಲು ಅಸೆ ನನಗೆ ನೀ ಇಲ್ಲವಾದೆ  
ಬದುಕು ನಿನ್ನದೆಂಬುದು ನನಗೂನು ಗೊತ್ತು
ಮರೆತುಬಿಟ್ಟೆಯ ನಿನ್ನಮ್ಮ ಕೊಟ್ಟ ಕೈ ತುತ್ತು
 
ನೀ ಅಂದು ಹೊರಟಾಗ ಬಹಳ ಖುಷಿಯಾಗಿದ್ದೆ
ಮತ್ತೆ ಬರೆನೆಂದಾಗ ಕುಗ್ಗಿ ಹೋಗಿದ್ದೆ 
ನನ್ನ ಚಿಂತೆ ನನಗೇನು ಇಲ್ಲವೋ ಗೆಳೆಯ 
ನಿನ್ನಂತ ಗೆಳೆಯರು ಇರುವರು ನೂರು 
ಸ್ವಲ್ಪ ಅಹಂಕಾರ ನನಗೆ ಆದರು ತರವಿಲ್ಲ 
ನನ್ನಂತಹ ಗೆಳೆಯರು ನಿನಗೆ ಸಿಗಲಾರು   
ನನ್ನ ನೋಡಲು ನೀನು ಮತ್ತೆ ಬರಬೇಡ
ಅಮ್ಮನ ಪ್ರೀತಿಯನು ಮರೆತು ಇರಬೇಡ
 
ಹಾಸಿಗೆಯ ಅಂಚಿನಲಿ ಜವರಾಯ ಕಾದಿಹನು 
ಮಗ ಬರುವನೆಂದು ನಿನ್ನಮ್ಮ ಹೇಳಿಹಳು
ಅವಳ ಬಿನ್ನಹವಕೆ ಬೆಲೆ ನೀಡಿ ಕುಳಿತಿಹನು  
ನಿನ್ನ ಬರುವಿಕೆ ಕಾದು ನಿನ್ನಮ್ಮ ಮಲಗಿಹಳು
ಉಸಿರ ಬುಗ್ಗೆಯ ಹಿಡಿದು ಎದುರು ನೋಡುತಿಹಳು
ಜವಾರಯನಿಗಿರುವ ಕರುಣೆ ನಿನ್ನಲಿಲ್ಲವ ಗೆಳೆಯ 
ಇದ್ದರೆ ಬಂದುಬಿಡು ಇಗಲೇ ಇನ್ನಿಲ್ಲ ಸಮಯ
 
ವಿದೇಶಗಳಲ್ಲಿದ್ದು ತಂದೆ ತಾಯಿಯರ ಸಾವಿಗೂ ಬರಲಾಗದಂತಹ ನತದೃಷ್ಟ ಮಕ್ಕಳಿಗೆ.....
 
ಪವನ್ :-

Tuesday, December 27, 2011

ಹಾಸ್ಯ ಕಲಾವಿದ

ನಗುವ ಹೊನಲ ಹರಿಸುವ ತವಕದಲಿ
ಕಾಲ್ ಕೆಳಗೆ ಮತ್ತು ತಲೆ ಮೇಲೆ ಮಾಡಿ
ನನ್ನನ್ನೇ ನಾ ಗೇಲಿಯಲಿ ತೊಡಗಿಸಿ
ಒಮ್ಮೊಮ್ಮೆ ಬಿದ್ದು
ಮರುಕ್ಷಣವೇ ಎದ್ದು
ನೋವನ್ನು ತಡೆದೆ ಬಿದ್ದಾಗ ಗುದ್ದು

ಮನೆಯವರ ನೆನಪು ನನಗಾಗಲಿಲ್ಲ
ಅಣಕಿಸಿದಾಗ ನನ್ನ ಮನ ನೋಯಲಿಲ್ಲ
ನನ್ನಂದ ನನಗಿಲ್ಲಿ ಹೆಮ್ಮೆಯೇನಿಲ್ಲ
ನೀವು ನಕ್ಕರೆ ಸಾಕು ಬೇರೇನೂ ಬೇಕಿಲ್ಲ

ತಿಳಿದವರು ನನ್ನ ತರಲೆ ಎಂದರು
ತನುಮನದಿ ನನ್ನಯ ಟೀಕೆಯಲಿ ತೊಡಗಿದರು
ತತ್ವ ಜ್ಞಾನವ ತಿಳಿಸುವ ಶಕ್ತಿ ನನಗಿಲ್ಲ
ವಿದ್ಯೆಯ ಮದವು ನೆತ್ತಿ ಹತ್ತಿಲ್ಲ

ಅರಿತಷ್ಟೇ ತಿಳಿಸಲು ಹೆದರಲ್ಲ ನಾನು
ಹೆಚ್ಚು ತಿಳಿದ ನೀನು ಮಾಡಿದ್ದಾದರೂ ಏನು
ನಿನ್ನನ್ನೇ ನೀ ಮಾಡ್ಕೊಂಡೆ ಹಣ ಮಾಡೋ ಯಂತ್ರ
ನನಗಿಲ್ಲಿ ಗೊತ್ತಿದೆ ನಗು ಹರಿಸೋ ತಂತ್ರ

ಹಾಸ್ಯ ಕಲಾವಿದರಿಗೆ ಸಣ್ಣ ನುಡಿ ನಮನ

ಪವನ್ :-

Wednesday, December 21, 2011

ಬದುಕ ಕೆತ್ತನೆ


ಕೆತ್ತು ಬಾ ಜೀವನ ಶಿಲ್ಪಿಯೆ
ಸುಂದರವಾದ ಶಿಲ್ಪವ ನನ್ನ ಬದುಕಿನಲಿ
ಬಿಗಿಯಾದ ಕಲ್ಲು ಹೃದಯವ
ಸಡಿಲ ಮಾಡು ಬಾ
ಕಲ್ಪನೆಯಲಿ ಕಾಯುತಿರುವೆ ನಾ
ಬದುಕ ಹೇಗೆ ಕೆತ್ತುವೆಯೆಂದು ಪ್ರತಿಯೊಂದು ಏಟಲು ನೀತಿ ಹೇಳು ನೀ
ತಪ್ಪಿಗೊಂದು ಏಟು ನೀಡುವ ಗುರುವಿನಂತೆ
ಎಗ್ಗುತಗ್ಗುಗಳು ಇರಲಿ ಶಿಲ್ಪದಲಿ
ನನ್ನಂದ ಕೆಡದಂತೆ
ಜನರಿಗೆಲ್ಲ ಬೆರಗಾಗಲಿ ನನ್ನ ನೋಡಿ
ಇವನಂತೆ ಇರಬೇಕೆಂದು
ಅಹಂ ಮುಡದಿರಲಿ ಮನದ ಕೋಣೆಯಲ್ಲಿ

ನಿನ್ನ ಪ್ರತಿಯೊಂದು ಏಟು
ನನಗೆ ಒಂದೊಂದು ನೀತಿ ಪಾಠ
ಅಲ್ಲಲ್ಲಿ ತಿದ್ದು ನೀ ತನ್ನತನ ಮರೆತಾಗ
ನಾಜೂಕಿರಲಿ ತಪ್ಪುಗಳ ತಿದ್ದುವಾಗ
ನಾ ತಿದ್ದಿಕೊಳ್ಳದಿದ್ದರೆ ಕೋಪಿಸಿಕೊಳ್ಳಬೇಡ
ನಿನ್ನ ಕೋಪದಿ ನಾ ಪುಡಿಯಾಗಿ ಬಿಟ್ಟೇನು
ಪುಡಿಯಾದ ಬದುಕ ಕಟ್ಟುವ ಶಕ್ತಿ ನನಗಿಲ್ಲ

ಪವನ್ :-

Monday, December 12, 2011

ಹೊಗಳಿಬಿಡಿ ನನ್ನ


ಹೊಗಳಿಬಿಡಿ ನನ್ನ
ನಾನೇನು ಉತ್ತಮನಲ್ಲ
ಹಾಗಂತ ಕೆಟ್ಟವನೂ ಅಲ್ಲ
ಆದರೂ ಹಾಳು ಮನದ ಮುಲೆಯಲ್ಲಿ
ಹೊಗಳವರೇನೋ ಎಂಬ ದುರಾಸೆ
ಹೊಗಳಿಬಿಡಿ ನನ್ನ

ಆಗಾಗ ತಲೆಕೆಟ್ಟ ಬರಹಗಳ ಓದಿ
ಪ್ರಾಸವಿಲ್ಲದ ಪದ್ಯದ ಅಂತರಾಳವನು ಅರಿತು
ಅಕ್ಷರದ ಭಾವಕ್ಕೆ ಬಹಳಷ್ಟು ಬೆಲೆ ನೀಡಿ
ಅರೆಬೆಂದ ಸಾಹಿತಿಯ ಕವನವನು ತಿಳಿದು
ಹೊಗಳಿಬಿಡಿ ನನ್ನ

ಉಪಮೆಯ ಉಪಯೋಗ ನನಗೆ ತಿಳಿದಿಲ್ಲ
ಅಲಂಕಾರಗಳಲ್ಲಿ ಪರಿಣಿತನು ನಾನಲ್ಲ
ತಿಳಿದವರು ನೀವು ತಿಳಿಯದವ ನಾನು
ಆಂಬೆಗಾಲನು ಇಡುತಿರುವೆ ಚಿವುಟದಿರಿ ನನ್ನ
ನೋವಲೂ ನಿಲ್ಲದು ನನ್ನ ಬರವಣಿಗೆ

ಅತ್ತಾಗ ದುಃಖದಲಿ ಬರೆವೆ
ನಕ್ಕಾಗ ನಲಿವಿನಲಿ ಬರೆವೆ
ಒಟ್ಟಿನಲಿ ಬದುಕಲ್ಲಿ ಬರವಣಿಗೆ ಮೆರೆವೆ
ಕೇಳಿಬಿಡಿ ನನ್ನ ಅಹವಾಲು
ಹಾಕುತಿಹೆ ನಿಮ್ಮಯ ಎದೆಗೆ ಟಪಾಲು
ಹೊಗಳಿಬಿಡಿ ನನ್ನ

ಪವನ್ :-

Monday, December 5, 2011

ಬಂದುಬಿಡು ನನ್ನ ಹೃದಯದ ಊರಿಗೆ


ನನ್ನ ಈ ಮನ ಒಪ್ಪಲಿಲ್ಲ
ಕಣ್ಣ ರೆಪ್ಪೆಯಿಂದ ನಿನ್ನ ಮರೆ ಮಾಡಲು
ಏನ ಮಾಡಲಿ ತೋಚುತಿಲ್ಲ
ನನ್ನ ಕಣ್ಣಲಿ ನಿನ್ನ ಆಕೃತಿಯ ಸೆರೆ ಹಿಡಿಯಲು

ಭಾವಚಿತ್ರ ನನಗೆ ಬೇಕಿಲ್ಲ
ಭಾವನೆಗಳಿಗೆ ನನ್ನ ಬಳಿ ಬರವಿಲ್ಲ
ಪ್ರೀತಿಯ ಈ ನನ್ನ ಈ ನಾದಕೆ ರಾಗದ ಅರಿವಿಲ್ಲ
ಯಾವ ರಾಗವಾದರು ನಾದ ಹೊಮ್ಮುತಿದೆಯಲ್ಲ
ರಾಗ ಹಿತವೆನಿಸದಿದ್ದರೇ ಬದಲಿಸುವೆ ಗೆಳತಿ
ನನ್ನ ಬಾಳಿನ ಹಾಡಿಗೆ ಬೇಕು ನಿನ್ನ ಒಲವಿನ ಸಮ್ಮತಿ

ಸಿಂಗಾರದ ಅರಮನೆಯಲಿ
ಪ್ರೀತಿ ಪದಗಳ ನದಿಯಲಿ
ಈಜುತಲಿ ಮೆರೆಯುತಲಿ ಮೀಯುತಿರಬೇಕ
ಬಂದುಬಿಡು ನನ್ನ ಹೃದಯದ ಊರಿಗೆ
ನಾ ಇರುವೆ ನಿನ್ನೊಡನೆ ಬದುಕಿನ ಪಯಣದಲಿ
ಮೆರೆಸುವೆ ನಿನ್ನನು ಮಹರಾಣಿಯ ರೀತಿ
ಕವನಗಳ ಬರೆಯುವೆನು ಕೋರಿ ನಿನ್ನಯ ಅಣತಿ

ಪವನ್:-    

Thursday, December 1, 2011

ಬೇಕಿಲ್ಲ ಅವನಿಗೆ ನಿನ್ನ ಈ ಕಾಯ


ನೀನು ನಿನ್ನದಲ್ಲ ನಾನು ನನ್ನದಲ್ಲ
ಸತ್ಯವನು ಯಾರು ತಿಳಿಯಲಿಲ್ಲ
ನಾನು ನನ್ನದೇ ಎಂಬ ಮಾಯೆಯಲಿ
ಕಿರುಚಿ ಹೇಳಿದರು ಗಾಳಿಯಲಿ
ಕೇಳಿಲ್ಲ ಜವರಾಯ
ಬೇಕಿಲ್ಲ ಅವನಿಗೆ ನಿನ್ನ ಈ ಕಾಯ

ನಿನಗಾಗಿ ಬಹಳಷ್ಟು ಮಿತ್ರರನು ಮರೆತೆ
ಮಾಡಿಲ್ಲ ಹೆತ್ತವರ ಬಗ್ಗೆ ಎಳ್ಳಷ್ಟು ಚಿಂತೆ
ಕಟ್ಟಿದೆ ರಾಶಿ ರಾಶಿ ಸುಳ್ಳಿನ ಕಂತೆ
ಅರಿವಿಲ್ಲದೇನೆ ಅತಿಯಾಗಿ ಅರಿತೆ

ಸೋಲೆಲ್ಲ ಗೆಲುವಾಗಿ ಬದಲಿಸಲು ಹೊರಟು
ಗೆಲುವಿಗೆ ಮೋಸದ ತೇಪೆಯನು ಕೊಟ್ಟು
ಕಪ್ಪು ಬಟ್ಟೆಯನು ಲೋಕದ ಕಣ್ಣಿಗೆ ಕಟ್ಟಿ
ತಿನ್ನುತಲಿ ಇತರರ ಪಾಲಿನ ರೊಟ್ಟಿ
ಹೇಳಿದನು ನಾ ಇಲ್ಲಿ ಲೋಕಕ್ಕೆ ಗಟ್ಟಿ
ಕೇಳಿಲ್ಲ ಜವರಾಯ
ಬೇಕಿಲ್ಲ ಅವನಿಗೆ ಈ ನಿನ್ನ ಕಾಯ

ಶುದ್ಧವಿಲ್ಲದ ನಿನ್ನ ಈ ಆತ್ಮದ ಪಾಡೇನು
ತಪ್ಪುಗಳ ತಿದ್ದದೆ ಸಾಯುವುದು ಸರಿಯೇನು
ಜವರಾಯ ನೀಡಲ್ಲ ಆತ್ಮ ಶುದ್ಧಿಯ ಉಪಾಯ
ಅವನಿಗೇಕೆ ಬೇಕು ನಿನ್ನ ಕಲ್ಮಶದ ಕಾಯ

ಪವನ್ :-