Friday, April 5, 2013

ಪವನ್'s ಡೈರೀಸ್ - 4

ಒಮ್ಮೊಮ್ಮೆ ಒಂದು ಏಟು ನಮ್ಮ ಪೂರ್ತಿ ಅಹಂಕಾರವನ್ನೇ ಇಳಿಸಿಬಿಡುತ್ತೆ ಅನ್ನಿಸುತ್ತೆ. ಅಪ್ಪ ಕೊಡೋ ಏಟು, ಅಮ್ಮ ಕೊಡೋ ಏಟು, ಗೆಳೆಯನಿಗಾಗಿ ಇನ್ನ ಯಾರ ಹತ್ರಾನೋ ತಿನ್ನೋ ಏಟು, ಮೇಷ್ಟ್ರು ಕೊಡೋ ಏಟು, ಹೀಗೆ ಏಟುಗಳು ಮನುಷ್ಯನನ್ನ ಕಠಿಣವಾಗಿಸದೆ ಮೃದುವಾಗಿಸುವಂತಿದ್ದರೆ ಆ ಏಟುಗಳಿಗೆ ಮಹತ್ವ ಬಹಳಾನೆ ಬಂದುಬಿಡುತ್ತದೆ. ಇಂತಹದೇ ಒಂದು ಏಟು ನನ್ನನ್ನು ಒಬ್ಬ ಜವಾಬ್ದಾರಿಯೆತ ವ್ಯಕ್ತಿಯನ್ನಾಗಿ ಮಾಡಿದೆ. ಆದ್ರೆ ಆ ಏಟು ತಿಂದದ್ದು ಬೇರೆ ಯಾರಿಂದಲೋ ಅಲ್ಲ ಒಬ್ಬ ಪೋಲೀಸಣ್ಣನಿಂದ!!

ಬೆಂಗಳೂರಿನಲ್ಲಿ ದಿನದ ಪಾಸುಗಳ ಪರಿಚಯ ಹೊಸತು. ಯಾವನು ಸೈನ್ ಮಾಡುತ್ತಿರಲಿಲ್ಲ ಚೆಕ್ಕು ಸರಿಯಾಗಿ ಮಾಡುತ್ತಿರಲಿಲ್ಲ. ಪಾಸು ಬಳಸಿ ಊರೆಲ್ಲ ತಿರುಗಿ ಮತ್ತೆ ಊರು ಸೇರಿ ಎಳನೀರ ಅಂಗಡಿಯವನಿಗೆ ಕೊಟ್ರೆ 5 ರೂಪಾಯಿ ಕೊಡುತಿದ್ದ. ಮತ್ತದೇ ಪಾಸನ್ನು ಇನ್ನೊಬ್ಬರಿಗೆ 10 ರೂ ಗೆ ಮಾರುವುದನ್ನ ನನ್ನ ಕಣ್ಣಾರೆ ಬಹಳ ಸಲ ನೋಡಿದ್ದೀನಿ. ಆ ರೀತಿ 10 ಅಥವಾ 15 ರೂ ಕೊಟ್ಟು ಪಾಸು ಕೊಂಡವರಲ್ಲಿ ನಾನು ಸಹ ಒಬ್ಬ.

ಪಕ್ಕದೂರಿನ ಕೇಬಲ್ ರಮೇಶಣ್ಣನವರ ಮಗನಿಗೆ ಉಪನಯನ ಕಾರ್ಯಕ್ರಮ ರಾಗಿಗುಡ್ಡ ದೇವಸ್ಥಾನದ ಛತ್ರದಲ್ಲಿ ಆಯೋಜಿಸಲಾಗಿತ್ತು. ದಿನದ ಪಾಸಿನಲ್ಲೇ ಅಲ್ಲಿಯವರೆಗೆ ಪ್ರಯಾಣ ಮಾಡಿ ಗಡತ್ತಾಗಿ ತಿಂದು ಮನೆಗೆ ವಾಪಸ್ ಬರುವಾಗ ದಿನದ ಪಾಸಿರುವ ಗುಂಗಿನಲ್ಲಿ ಸಿಕ್ಕ ಸಿಕ್ಕ ಬಸ್ಸುಗಳನ್ನ ಹತ್ತಿ ಫುಟ್ ಬೋರ್ಡೀನ ಮೇಲೆ ಓಲಾಡುತ ಮನೆಗೆ ಹೊರಟಿದ್ದೆ. ಆಗೆಲ್ಲ ಸ್ವಲ್ಪ ಸಹವಾಸ ಜೋರಾಗೆ ಇತ್ತು ಬಿಡಿ, ಕಂಡಕ್ಟರಿಗಿಂತ ನಾನೆ ಹೆಚ್ಚು ಡ್ಯೂಟಿ ಮಾಡ್ತಿದ್ದೆ. ನನಗಿಂತ ಕೆಳಗಿನ ಮೆಟ್ಟಿಲಲ್ಲಿ ನಿಂತವರಿಗೆ ಆವಾಸ್ ಹಾಕಿ ಒಳಗೆ ಕಳ್ಸೋದು,ಕಾಲರ್ ಮೇಲಕ್ಕೆತ್ತಿಕೊಂಡು ಕೈಗೆ ತಾಮ್ರದ ಬಳೆ ಜೊತೆಗೊಂದಷ್ಟು ಕಲರ್ ಕಲರ್ ದಾರಗಳು, ಕತ್ತಿಗೆ ಮಣಿ ಸರ, ಕೈಗೊಂದು ಮಣಿಸರ, ಕಾಲರ್ ಮೇಲೆ ಕೆಂಪು ಬಣ್ಣದ ಕರ್ಚೀಪು, ಅಬ್ಬಬ್ಬ ನನ್ ಲುಕ್ಕೇ ಒಂತರ ವಿಚಿತ್ರವಾಗಿರ್ತಿತ್ತು.ಯಾವ್ದಾದ್ರು ಕಾಲ್ ಬಂದ್ರೆ ಏನೋ ಮಚ್ಚ, ಅಡ್ಡದಲ್ಲಿ ಸಿಕ್ಕಣ ಬಿಡು, ಆ ನನ್ ಮಗನಿಗೆ ಸರ್ಯಾಗಯ್ತೆ ಅಂತೆಲ್ಲ ಬರೀ ಶೋಕಿ ಮಾತುಗಳು.

ಹೀಗೆ ಬಸ್ಸಿನಿಂದ ಬಸ್ಸಿಗೆ ಎಗರಾಡ್ತ ಯಾವ್ದೊ ಒಂದು ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತಿದ್ದೆ. ಬಂದ ಕಂಡಕ್ಟರ್ ಟಿಕೆಟ್ ಟಿಕೆಟ್ ಅಂದ, ಪಾಪ ಉತ್ತರ ಕರ್ನಾಟಕದವನು, ಪಾಸ್ ಅಂದೆ, ತೋರಿಸ್ರಿ ಅಂದ, ಸ್ಟೈಲ್ ಆಗಿ ಪಾಸ್ ಎತ್ತಿ ಅವನ ಕೈಗಿಟ್ಟೆ, ಸರಿ ಒಳಗ್ ಬಾರೋ ಡೋರ್ ನಾಗ ಎದಕ್ ಸಾಯ್ತಿದ್ದಿ ಅಂದ. ಯಾಕೋ ಅವನ ಏಕವಚನ ನನ್ನ ಬಿಲ್ಡಪ್ಪಿಗೆ ಅಹಂಕಾರಕ್ಕೆ ಸರಿ ಅನ್ಸಿಲ್ಲ. ನಂಗಿಂತ ಸುಮಾರು 10 ವರ್ಷ ದೊಡ್ಡ ವ್ಯಕ್ತಿ ಇರ್ಬೋದು, ಯಾವನಿಗೆ ಬಾರೋ ಹೋಗೋ ಅಂತ್ಯ ಅಂತ ಮೇಲೆ ಹತ್ತಿ ಬಂದು ತಳ್ಳೇಬಿಟ್ಟೆ. ಸ್ವಲ್ಪ ಹಿಂದೆ ಸರಿದವ್ನೆ ನನ್ನೇ ಹೊಡ್ಯಾಕ್ ಬರ್ತೀ, ಅಂತ ಕೈ ಎತ್ತಲು ಹೋದ ಅಷ್ಟರಲ್ಲಿ ಎಲ್ಲಿತ್ತೋ ಆವೇಶ ಮುಷ್ಟಿ ಮಾಡಿ ಒಂದು ಏಟು ಮೂತಿಗೆ ಕೊಟ್ಟುಬಿಟ್ಟಿದ್ದೆ. ಯಪ್ಪೋ ನನ್ನ ಕೊಂದು ಬಿಡ್ತಾನೋ ಅಂತ ಕಿರುಚಿ ಬಸ್ಸು ನಿಲ್ಸಿಬಿಟ್ಟ. ನನಗೆ ದಿಕ್ಕೇ ತೋಚದಂತಾಯಿತು, ಭಯದಿಂದ ತಟಸ್ಥನಾಗಿ ನಿಂತುಬಿಟ್ಟೆ. ಮುಂದೆಯಿಂದ ಯಾರೋ ಬಂದಂಗಾಯಿತು. ಬಂದ ಬಂದವರೇ ನನ್ನ ಕಪಾಳಕ್ಕೆ ಛಿಟೀರ್ ಎಂದು ಬಿಟ್ಟಿದ್ದರು. ಒಂದು ಕ್ಷಣ ಸಾವಿನ ಮನೆಯಲ್ಲಿನಂತಹ ಮೌನ, ಕಿವಿಯಲ್ಲಿ ಕುಯ್ಯ್ಯ ಎಂಬ ತಂತಿಯ ನಾದ. ನಿಂತ ಜಾಗದಲ್ಲೇ ಕುಸಿದು ಕುಂತುಬಿಟ್ಟೆ.

ಅಷ್ಟರಲ್ಲೇ ಒಂದಷ್ಟು ಜನ ತಿರುಗಿಸ್ರೀ ಸ್ಟೇಷನ್ ಗೆ ಬಸ್ಸು ಅಂದ್ರು, ನನ್ನ ಹೊಡೆದಾತ, ಓಯ್ ಯಾವೂರೋ ಅಂದ ಸಾರ್ ಆನೇಕಲ್ಲು ಸಾರ್ ಅಂದೆ. ಏನ್ ಮಾಡ್ತಿದ್ಯ ಅಂದ, ಸಾರ್ ಇಂಜಿನಿಯರಿಂಗ್ ಓದ್ತಾ ಇದ್ದೀನಿ ಸಾರ್ ಅಂದೆ. ಏನೋ ನಿಂದು ಅವತಾರ? ರೌಡಿ ಏನೋ ನೀನು? ಏನಿದು ಕೈಗೆ ಅಷ್ಟೊಂದು ದಾರ, ಮಣಿ, ಕತ್ತಿಗೆ ಮಣಿ ಸರ, ತಾಮ್ರದ ಕಡಗ ಎಲ್ಲ ಅಂದ. ಸಾರ್ ಎಲ್ಲ ದೇವ್ರುದು ಸಾರ್ ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಂದೆ. ಓದೋ ಹುಡುಗ ಇಂತಾ ಶೋಕಿಗಳೆಲ್ಲ ಮಾಡ್ತಿದ್ಯಲ್ಲ ನಾಚಿಕೆ ಆಗಲ್ವ ಅಂದ. ಸಾರಿ ಸಾರ್ ತಪ್ಪಾಯ್ತು ಅಂದೆ. ಅಷ್ಟರಲ್ಲೇ ಯಾರೋ ಸಾರ್ ಇಂತವ್ರನ್ನೆಲ್ಲ ಪೋಲೀಸ್ನೋರಿಗೆ ಹಿಡ್ಕೊಡ್ಬೇಕು ಸಾರ್, ಗವರ್ನಮೆಂಟ್ official ಮೇಲೆ ಕೈ ಮಾಡಿದ್ದಾನೆ ಅಂದ್ರು. ಆಗ ನನ್ನ ಹೊಡೆದ ವ್ಯಕ್ತಿ,ಅಲ್ರೀ ಆ ಹುಡುಗ ಫುಟ್ ಬೋರ್ಡ್ ಮೇಲೆ ನಿಂತಿದ್ದಾಗ ಮಾತಾಡಿಲ್ಲ, ಕಂಡಕ್ಟರ್ ಜೊತೆ ಸುಮ್ ಸುಮ್ನೆ ಜಗಳ ಆಡಿದಾಗ ಮಾತಾಡಿಲ್ಲ, ಈಗ ಬಂತೇನ್ರಿ ನಿಮ್ಮ ಧ್ವನಿ, ಹೋಗಿ ಕೆಲ್ಸ ನೋಡ್ಕೋಳ್ರಿ ಅಂತ ಬೈದ, ನಂತರ ಮುಂದಿನ ಸ್ಟಾಪಲ್ಲಿ ಇಳಿದ. ಸ್ಟಾಪಿನ ಬಳಿಯಲ್ಲೇ ಇದ್ದ ಪೋಲೀಸ್ ಸ್ಟೇಷನ್ ಕಡೆ ಹೋಗುತಿದ್ದಾಗ ಆತನ ಕಾಕಿ ಪ್ಯಾಂಟು ಮತ್ತು ಕನ್ನಡಕದಿಂದ ಗಮನಕ್ಕೆ ಬಂತು ಆತ ಸಹ ಪೋಲೀಸಣ್ಣನೇ ಅಂತ.
ಅವತ್ತು ನನಗೆ ಏಟು ಕೊಡದಿದ್ದರೆ, ಅಥವಾ ಸ್ಟೇಷನ್ನಿಗೆ ಒಯ್ದಿದ್ದರೆ, ನಾನಿಂದು ನಿಮ್ಮ ಮುಂದೆ ಬರೆಯಲಾಗುತ್ತಿರಲಿಲ್ಲ.

ಪವನ್ ಪಾರುಪತ್ತೇದಾರ

1 comment:

  1. ಡೈರಿ ಧಾರಾವಾಹಿ ಬಹಳ ಆಪ್ತ ಎನಿಸಿತು ಗೆಳೆಯ.

    ಈ ಸಂಚಿಕೆಯಲ್ಲಿ ಬೆಂಗಳೂರಿನ ಪಜೀತಿಗಳು ಸಾದೃಶ್ಯವಾಯಿತು.

    http://www.badari-poems.blogspot.in/

    ReplyDelete