Friday, April 5, 2013

ಒಂದು ಕವಿತೆ

ಕಾಗುಣಿತ ಕುಣಿಸುತ ಪದಗಳನು ಪೋಣಿಸಿ
ಕವಿತೆಯ ಹಾರವನು ಸೃಷ್ಠಿಸಿದರೆ ಸಾಕೆ
ಓದುಗನ ಮನಸಿಗೆ ತೊಡಿಸಬೇಕಲ್ಲವೆ
ಪಾಯಸವ ಮಾಡಿ ಚಮಚದಲಿ ಹಿಡಿದು
ದೂರದಿಂದಲೆ ಅದನ ಮೂಸಿ ಎಂದರೆ ಸಾಕೆ
ತಿನ್ನುಗನ ಎಲೆಯಲ್ಲಿ ಧಾರಾಳವಾಗ್ಬಡಿಸಿ
ಚಪ್ಪರಿಸೋ ಅಂದವ ನೋಡಬೇಕಲ್ಲವೇ

ಇಷ್ಟಕಷ್ಟಗಳ ಇಟ್ಟಿಗೆಯ ಕೂಡಿಸಿ
ಬಿನ್ನ ಭಾವಗಳ ಮರಳನ್ನು ಮಿಶ್ರಿಸಿ
ಕಾವ್ಯದಲೆ ಮನೆಯನ್ನು ಕಟ್ಟಿದರೆ ಸಾಕೆ
ಪರರನ್ನು ಕರೆದು ಓರೆಕೋರೆಗಳ ತಿಳಿದು
ಮೆಚ್ಚುಗೆಯ ಮಾತುಗಳ ಮುದವನ್ನು ಪಡೆದು
ಮನೆಯ ಬಗ್ಗೆ ತಾ ಗರ್ವ ಪಡಬೇಕಲ್ಲವೇ

ಒಂದೊಂದು ಚಕ್ರಕೂ ಕಲ್ಪನೆಯ ಬೆಸೆದು
ಮುಗಿದೋದ ಕಾಲವನು ಮತ್ತೆ ಮರುಸೆಳೆದು
ಒಳಗೊಳಗೆ ಹುದುಗಿಟ್ಟು ಕೂರುವುದು ಸಾಕೆ
ಓದುಗರ ಮುಂದೆ ಧೈರ್ಯದಲಿ ಇಟ್ಟು
ಪ್ರೀತಿಯ ತೈಲವನು ಸಾಲದಲಿ ಪಡೆದು
ಬರಹದ ಬಂಡಿಯಲಿ ಚಲಿಸಬೇಕಲ್ಲವೇ
ಬರಹದ ಬಂಡಿಯಲಿ ಚಲಿಸಬೇಕಲ್ಲವೇ

ಪವನ್ ಪಾರುಪತ್ತೇದಾರ

No comments:

Post a Comment