Friday, February 1, 2013

ಯೋಧನಾಗಬೇಕಿಲ್ಲ


ದೇಶದೆಡಗಿನ ಭಕ್ತಿ ತೋರಲು
ದೇಶ ಪ್ರೇಮದ ಮೂರ್ತಿ ಕೆತ್ತಲು
ಹಿಮದ ರಾಶಿಯಲಿ ನಡೆಯಬೇಕಿಲ್ಲ
ಹಿಡಿದು ಆಯುಧ ಸಿಡಿಯಬೇಕಿಲ್ಲ

ಮಿಥ್ಯವಾಗದಿರಲಿ ನಿನ್ನ ನಂಬಿಕೆ
ಸತ್ಯ ನುಡಿಯಲಿ ನಿನ್ನ ನಾಲಿಗೆ
ಕಟ್ಟು ತೆರಿಗೆಯ ಸರಿಯ ಲೆಕ್ಕದಿ
... ತೆತ್ತು ದಂಡವ ಸರಿಯ ಮಾರ್ಗದಿ

ಮತದ ಹಕ್ಕನು ಮರೆಯಬೇಡ ನೀ
ಮನುಜ ಮತವನು ಮರೆಯಬೇಡ ನೀ
ಆಯ್ಕೆ ಎಂದರೆ ಹಣದ ಆಮಿಷ
ದೂರ ದೂಡು ನೀ ಅಂಥ ಕಲ್ಮಷ

ಬಿತ್ತಬೇಡವೋ ವಿಷದ ಬೀಜವ
ಧರ್ಮವೆಂಬುದು ಶಾಂತಿ ಸೌರಭ
ಪರರ ನಂಬಿಕೆಗೆ ಇರಲಿ ಗೌರವ
ನೋವ ನೀಡದವ ವಿಶ್ವ ಮಾನವ

ತಾಯಿ ಭಾರತಿಯ ಪ್ರೀತಿ ಗೆಲ್ಲಲು
ಭಾರತೀಯರ ಮನವ ಸೇರಲು
ಗಡಿಯ ಕಾಯುವ ಜೀವ ತೆತ್ತುವ
ಯೋಧನಾಗಬೇಕಿಲ್ಲ ನೀ
ಸಭ್ಯ ನಾಗರೀಕನಾದರೆ ಸಾಕು

ಪವನ್ ಪಾರುಪತ್ತೇದಾರ :-

No comments:

Post a Comment