Wednesday, May 16, 2012

ಬದುಕಿನ ಬಂಡಿ

ಕಾಡುತಿದೆ ಮನದಲೇನೋ ದುಗುಡ
ಮರೆತು ಬಿಡುವೆನೋ ಏನೋ ಎಂಬ ಭಯ
ಸಿಂಬಳವ ಒರೆಸಿ ಸಿಹಿಯಾದ ಮಾತಾಡಿ
ಮುದ್ದಾದ ಪದ್ಯಗಳ ನಮ್ಮುಂದೆ ಹಾಡಿ
ಬದುಕ ಬಂಡಿಗೆ ಮೊದಲ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ರಾಶಿ ಮನೆಕೆಲಸವ ಕೊಟ್ಟು
ತಪ್ಪು ಮಾಡಿದಾಗೆಲ್ಲ ಪೆಟ್ಟು ಕೊಟ್ಟು
ಬರೆಯದೇ ಬಂದಾಗ ಬರೆಯಿಟ್ಟು
ಗೆಣ್ಣುಗಳ ಊದಿಸಿ ತೊಡೆಪಾಯಸವ ನೀಡಿ
ಬದುಕ ಬಂಡಿಗೆ ಎರಡನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಜಿಪ್ಪು ಹಾಕದಿದ್ದಾಗ ಗುಟ್ಟಾಗಿ ಹೇಳಿ
ಶಾಲೆ ತಪ್ಪಿಸಿದಾಗ ಜೊತೆಯಲ್ಲಿ ತಿರುಗಿ
ಈಜಾಡಿ ನಲಿದಾಡಿ ಆಗಾಗ ಹೊಡೆದಾಡಿ
ಅಗಲಿಕೆಯ ಕಣ್ಣೀರ ಈಗಲು ಸುರಿಸುತಿಹ
ಬದುಕ ಬಂಡಿಗೆ ಮೂರನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಲವೇ ನೀನು ಮಂದಾರವೆಂದೂ
ಕಾಣುವೆ ಅಷ್ಟೆ, ಕೈಗೆಟಕದೆಂದು
ತನ್ನತನ ತಾನೇ ಕಳೆದುಕೊಂಡಾಗಿ
ಕಣ್ಣೀರ ಪಾಠವನು ಪ್ರೀತಿಯಲಿ ತಿಳಿಸಿದ
ಬದುಕ ಬಂಡಿಗೆ ನಾಲ್ಕನೇ ಗೇರು ಹಾಕಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಅಡಿಗಡಿಗೆ ನಮಸ್ಕಾರ ಆಗಾಗ ಅಲಂಕಾರ
ತೀರ್ಥ ಪ್ರಸಾದಗಳಂತೂ ಲೆಕ್ಕವೇ ಇಲ್ಲ
ಮನೆಯಲ್ಲು ದೇವರು ಗುಡಿಯಲ್ಲು ದೇವರು
ಬದುಕ ಬಂಡಿಗೆ ಐದನೇ ಗೇರು ಹಾಕಿದವರ
ಬಂಡಿಯ ವೇಗವ ಶರವೇಗ ಮಾಡಿದವರ
ಮರೆತು ಬಿಡುವೆನೋ ಏನೋ ಎಂಬ ಭಯ

ಒಮ್ಮೆ ನಿಮ್ಮ ಬದುಕ ಬಂಡಿ ರೆವೆರ್ಸ್ ಗೇರ್ ಹಾಕಿ ನೋಡಿ ಸ್ನೇಹಿತರೆ, ನಿಮ್ಮ ಕಣ್ಣು ಒದ್ದೆ ಆಗದೆ ಇರದು....

ಪವನ್ ಪಾರುಪತ್ತೇದಾರ :-

No comments:

Post a Comment