Thursday, August 18, 2011

ಭ್ರಷ್ಟಾಚಾರ

ಪವನ್ ಪರುಪತ್ತೆದಾರ   
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮುಲಾಜಿಲ್ಲದೆ ಪ್ರವೀಣ್ ಗೆ ಫೋನಾಯಿಸಿ ಪಹಣಿ ಬೇಕಾಗಿತ್ತು ಎಂದು ತಿಳಿಸಿದೆ. ಕೆಲವೇ ನಿಮಿಷದಲ್ಲಿ ಹಾಜರಾದ ಪ್ರವೀಣ್ ಸೀದ ನಿಂತಿದ್ದ ಜನರೆಲ್ಲರ ಮುಂದೆಯೇ, ಪಹಣಿ ಕೊಡುವ ಕೇಂದ್ರದ ಒಳಗೆ ಹೋದ. ಹತ್ತೇ ನಿಮಿಷದಲ್ಲಿ ಪಹಣಿ ತಂದು ಕೊಟ್ಟ. ನಾನು ಸರದಿಯಲ್ಲಿ ನಿಂತು ಪಹಣಿ ಪಡೆದುಕೊಂಡಿದ್ದರೆ ಸುಮಾರು ೩ ತಾಸಾದರೂ ಬೇಕಾಗಿತ್ತು ಯಾರಿಗೆ ಗೊತ್ತು ಕಂಪ್ಯೂಟರ್ ಕೆಟ್ಟು ಹೋಗಿದ್ದರೆ ಅಂದು ನನಗೆ ಪಹಣಿಯೇ ಸಿಗುತ್ತಿರಲಿಲ್ಲ. ಸರದಿಯಲ್ಲಿ ನಿಂತಿದ್ದರೆ ಪಹಣಿ 10 ರು ಆಗುತ್ತಿತ್ತು. ಅವನ್ನೆಲ್ಲ ತಪ್ಪಿಸಿಕೊಂಡಿದ್ದರಿಂದ ನಾನು ಕೊಟ್ಟ ಕಾಸು ಕೇವಲ 5ru ಹೆಚ್ಚು ಅಷ್ಟೇ. ನನ್ನ ಮೂರೂ ಘಂಟೆ ಸಮಯ, ಮತ್ತು energy ಉಳಿಯಲು ನಾನು ವ್ಯಯಿಸಿದ್ದು ಕೇವಲ 5 ರು ಮಾತ್ರ. ನನಗೆ ಅನುಕೂಲವಾದಾಗ 5 ರು ಹೆಚ್ಚು ಖರ್ಚು ಮಾಡಲು ಯಾವುದೇ ಅಭ್ಯಂತರ ಇಲ್ಲ. ನಾನು ಮಾತ್ರವಲ್ಲ ನಮ್ಮಲ್ಲಿ ಬಹಳಷ್ಟು ಮಂದಿ ಈ ಭ್ರಷ್ಟಾಚಾರವನ್ನು ತಮ್ಮ ಅನುಕೂಲ ಸಿಂಧುವಾಗಿ ಬಳಸಿಕೊಂಡಿರುತ್ತಾರೆ. ಪ್ರವೀಣ್ ನನಗೆ ರಾಜಾರೋಷವಾಗಿ ಹೇಳುತ್ತಾನೆ " ಮಗಾ ನಿಂಗೆ ನಮ್ಮೂರಿನ ತಾಲ್ಲೂಕು ಆಫೀಸ್ ನಲ್ಲಿ ಏನೇ ಕೆಲಸ ಇದ್ರೂ ಹೇಳು, ಸ್ನೇಹಿತ ಅಂತ ಸಾಧ್ಯವಾದಷ್ಟು ಕಡಿಮೆಯಲ್ಲಿ ಮಾಡಿಸಿ ಕೊಡ್ತೀನಿ. ಇಲ್ಲಿ ಗುಮಾಸ್ತನಿಂದ ತಹಶಿಲ್ದಾರ್ ವರೆಗೆ ಎಷ್ಟು ಎಷ್ಟು ಕೊಡಬೇಕು ಎಂದು ನನಗೆ ಗೊತ್ತಿದೆ ಅಂತ"
ಇದು ತಾಲ್ಲೂಕು ಆಫೀಸ್ ಗಷ್ಟೇ ಸೀಮಿತವಾದ ವಿಷಯವಲ್ಲ, ನಮ್ಮ ರಾಜ್ಯದ ಎಲ್ಲ ಊರುಗಳಲ್ಲೂ ವಾಹನ ತರಬೇತಿ ಕೇಂದ್ರಗಳಿವೆ. ಇಲ್ಲಿ ನೀವು 3500 ರು ಕೊಟ್ಟು ನೊಂದಾಯಿಸಿದರೆ ಸಾಕು ನೀವು ಒಂದೆರಡು ದಿನ ಅವರೊಂದಿಗೆ ಕಲಿತು ನಂತರ inspector ಮುಂದೆ ಗಾಡಿ ಹೇಗಾದರು ಓಡಿಸಿ ನಿಮಗೆ ಪರವಾನಗಿ ಸಿಗುತ್ತದೆ. ಯಾಕಂದರೆ ನೀವು ಕೊಡುವ 3500 ರು ನಲ್ಲಿ 500 ಓ 1000 ಓ ಅ inspector ಜೇಬಿಗೆ ಸೇರಿರುತ್ತದೆ. ಅದೇ ನೀವು ನಿವಾಗಿಯೇ ಸರಿಯಾಗಿ ಕಲಿತು ಅವನ ಮುಂದೆ ಓಡಿಸಿ ತೋರಿಸಿ, ಕೆಲಸಕ್ಕೆ ಬಾರದ ಒಂದೆರಡು ಪ್ರಶ್ನೆ ಕೇಳಿ ನಿಮ್ಮನ್ನು reject ಮಾಡುತ್ತಾನೆ. ನಿಮಗೆ ಒಂದೇ ಸಲಿಗೆ ಪರವಾನಗಿ ಕೊಡುವುದಿಲ್ಲ, ಅದು ತಪ್ಪು ಇದು ತಪ್ಪು ಎಂದು ಎಣಿಸುತ್ತಾನೆ. ನಿಮ್ಮಿಂದ ಹಣ ಕೀಳುವ ವರೆಗೂ ಬಿಡುವುದಿಲ್ಲ. ನಾಗರಿಕರು ಇವನ ಬಳಿ ಯಾವನು ಪದೇ ಪದೇ ಅಲೆಯುವುದು ಎಂದು ಅವನು ಕೇಳಿದಷ್ಟು ಹಣವನ್ನೋ, ಅಥವಾ ಯಾವುದಾದರು ವಾಹನ ತರಬೇತಿ ಕೇಂದ್ರದಿಂದಲೋ ಬಂದು ಪರವಾನಗಿ ಪಡೆಯುತ್ತಾರೆ. ಇಲ್ಲಿ ನಾಗರೀಕನಿಗೆ ಪರವಾನಗಿ ಸಿಕ್ಕರೆ ಸಾಕು ಎಂಬ ಕುತೂಹಲ, ಮತ್ತೆ ಮತ್ತೆ ಬರಬಾರದೆಂಬ ಹಂಬಲ. ಅದೇ ನಮ್ಮ ಅಧಿಕಾರಿಗೆ ಹೇಗಾದರೂ ದುಡ್ಡು ಮಾಡಬೇಕಂಬ ಬಯಕೆ. ಇಲ್ಲಿ ಸಹ ನಾಗರೀಕನಿಗೆ ಭ್ರಷ್ಟಾಚಾರ ಅನುಕೂಲ ಸಿಂಧುವಾಗಿದೆ.
ಇನ್ನು ನಮ್ಮ ರಾಜ್ಯದಲ್ಲಿ ನಡೆದ ಗಣಿ ಹಗರಣದ್ದು ಅದೇ ಕಥೆ ಅಲ್ಲವೇ. ನಿನಗೆ ನಾನು ಕೆಲಸ ಮಾಡಿಕೊಡುತ್ತೇನೆ ನನಗೆ ನೀನು ಎಷ್ಟು ಕೊಡುತ್ತಿಯ ಅನ್ನೋ ಮನೋಭಾವ ಎಲ್ಲ ರಾಜಕೀಯ ವ್ಯಕ್ತಿಗಳಲ್ಲಿ ಬಂದುಬಿಟ್ಟಿದೆ. ಚುನಾವಣೆಗೆ ಕೋಟಿ ಕೋಟಿ ಸುರಿದು ಬರುವುದೇ, ಇಲ್ಲಿ ನೂರಾರು ಕೋಟಿ ಲೂಟಿ ಹೊಡೆಯಲು ಎಂದು ಮೊದಲೇ ನಿರ್ಧರಿಸಿದಂತಿದೆ. ಒಂದು ಉದಾಹರಣೆ ನಮ್ಮ ವಾರ್ಡ್ ಎಲೆಕ್ಷನ್ ಗೆ ಒಂದು ಪಕ್ಷದ ಅಭ್ಯರ್ಥಿ ಏನೇನು ನೀಡಿದ್ದ ಗೊತ್ತೇ?? ಮೂಗು ಬಟ್ಟು(ಚಿನ್ನದ್ದು), ಅಕ್ಕಿ ಮೂಟೆ, ಮತ್ತು ಒಂದು ಓಟಿಗೆ 1000 ರು. ಅವನ ಚುನಾವಣ ವೆಚ್ಚ 50 ಲಕ್ಷವಂತೆ, ಭಗವಂತಾ....!! ಅಷ್ಟು ಹಣ ಖರ್ಚು ಮಡಿದ ಮೇಲೆ, ಅವನು ವಾರ್ಡ್ ನ ಅಭಿವೃದ್ಧಿಗಾಗಿ ಬರುವ ಹಣವನ್ನು ಪೂರ್ತಿಯಾಗಿ ಅದಕ್ಕೇ ಬಳಸುತ್ತಾನೆಂಬ ನಂಬಿಕೆ ಯಾವ ನಾಗರಿಕನಿಗೂ ಇರುವುದಿಲ್ಲ. ಆದರೆ ಅವನು ಕೊಡುವ ಸಮಯದಲ್ಲಿ ಎಲ್ಲರು ನಾ ಮುಂದು ತಾ ಮುಂದು ಎಂದು ತೆಗೆದುಕೊಳ್ಳುತ್ತಾರೆ. ನಮ್ಮ ಜನರಲ್ಲೂ ಅವನು ಗೆದ್ದಮೇಲೆ ಕೆಲಸ ಮಾಡುವುದಿಲ್ಲ ಎಂದು ಖಾತ್ರಿಯಾಗಿದೆ, ಅದಕ್ಕೆ ಚುನಾವಣೆ ಸಮಯದಲ್ಲೇ ಎಷ್ಟು ಬರುತ್ತೋ ಅಷ್ಟೂ ಎಲ್ಲ ಪಾರ್ಟಿಗಳಿಂದ ಕಿತ್ತುಬಿಡೋಣ ಎಂಬ ಅಸೆ ಬುರುಕುತನ, ಇಲ್ಲೂ ಸಹ ಭ್ರಷ್ಟಾಚಾರವನ್ನು ಅನುಕೂಲ ಸಿಂಧುವಾಗಿ ಬಳಸಿಕೊಳ್ಳುತಿದ್ದಾರೆ.
ಇನ್ನು ಕೇಂದ್ರ ಸರ್ಕಾರದ್ದು, 2G ಹಗರಣ, CWG ಹಗರಣ, ಮಹಾರಾಷ್ಟ್ರದ ಆದರ್ಶ್ ಸೊಸೈಟಿ ಹಗರಣ ಎಷ್ಟು ಬೇಕು ಸ್ವಾಮಿ ಎಲ್ಲ ಹಗರಣಗಳಿಗು ಮುಲ ಕಾರಣ ಚುನಾಯಿತ ಪ್ರತಿನಿಧಿಗಳು ತಾವು ಜನರಿಂದ ಆರಿಸಲ್ಪಟ್ಟ ನಾಯಕರು ಎಂಬುದನ್ನು ಮರೆತು. ಎಲ್ಲಾ ವ್ಯವಹಾರಗಳನ್ನು ಮಾಡುವ ಏಜೆಂಟ್ ಗಳು ಎಂದುಕೊಂಡಿದ್ದಾರೆ. ನಮ್ಮ corporate ಜನ ಅಂದರೆ ಬಿಸಿನೆಸ್ಮೆನ್ ಗಳು. ಇಂತಹ ದಲ್ಲಾಳಿಗಳನ್ನು. ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಾರೆ. ಅವರಿಗೇನು ಹಣ ಸಂಪಾದನೆ ಆದರೆ ಅಷ್ಟೇ ಸಾಕು. ಸಾಮಾನ್ಯ ಜನರ ಬಗ್ಗೆ ಚಿಂತಿಸುವುದಕ್ಕೆ ಅವರೇನು ಬೀದಿ ಕೊಳಾಯಿಗಳಲ್ಲಿ ಕುಡಿಯುವ ನೀರಿಗೆ ಎಲ್ಲರ ಜೊತೆ ಜಗಳವಾಡುವವರಲ್ಲ, ಮನೆಯಲ್ಲಿ ಎಲ್ಲಿ ನಲ್ಲಿ ತಿರುಗಿಸಿದರೆ ಅಲ್ಲಿ ನಿರು ಬರುತ್ತದೆ. ಮನೆಯ ಬಳಿಯ ಕರೆಂಟ್ ಕಂಬದಲ್ಲಿ ತೊಂದರೆ ಆದರೆ ಲಂಚ ಕೊಟ್ಟು ಕಂಬ ಹತ್ತಿಸೋಕೆ ಲೈನ್ ಮ್ಯಾನ್ ಕರೆತರಬೇಕಿಲ್ಲ, ಅವರಿರುವ ಜಾಗದಲ್ಲಿ ೨೪ ಘಂಟೆ ಪವರ್ ಇರುತ್ತದೆ. ಇನ್ನು ಇಂತಹ ಉದಾಹರಣೆಗಳು ಹಲವು....
ಈಗ್ಗೆ ಈ ಭ್ರಷ್ಟಾಚಾರದ ವಿರುದ್ಧ ಅಣ್ಣ ಹಜಾರೆ ಅವರು ನಿರಶನ ಕೈಗೊಂಡಿದ್ದಾರೆ, ಆದರೆ ಅವರ ನಿರಶನದಿಂದ ಮಾತ್ರ ನಮ್ಮ ದೇಶ ಬದಲಾಗುವುದಿಲ್ಲ. ಅದು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಂದು ದಾರಿ ಅಷ್ಟೇ. ಅದರಲ್ಲಿ ಸ್ವಲ್ಪವಾದರೂ ಯಶ ಕಂಡರೆ ಅವರ ನಿರಶನ ನಡೆಸಿದ್ದಕ್ಕೂ ಒಂದು ಅರ್ಥವಿರುತ್ತದೆ. ಆದರೆ ಈ ಅವಕಾಶವಾದಿ ರಾಜಕಾರಿಣಿಗಳು ಯಾವ ಯಾವ ರೀತಿ ಉಸರವಲ್ಲಿಯಂತೆ ಬಣ್ಣ ಬದಲಿಸುತಿದ್ದಾರೆ ಎಂಬುದನ್ನು ನೀವೇ ಗಮನಿಸಿದ್ದೀರಿ. ಭ್ರಷ್ಟಾಚಾರ 1947 ಆಗಸ್ಟ್ 15 ರಂದೇ ಹುಟ್ಟಿದೆ ಅಗಲಿಂದಲೇ ಇದರ ಬೇರನ್ನು ಬೆಳೆಯಲು ಬಿಡಬಾರದಿತ್ತು ಆದರೆ ಅದು ಈಗ ಬೃಹದಾಕಾರವಾಗಿ ಬೆಳೆದಿದೆ. ಸಾಧ್ಯವಾದಷ್ಟು ಹೋರಾಡೋಣ. ನಿಜವಾದ ಹೋರಾಟ ನಾವು ನಮ್ಮ ಅನುಕೂಲತೆಯ ಆಸೆಯ ಮನಸಿನ ಮೇಲೆ ನಡೆಸಬೇಕು. ಪಹಣಿಗೆ ಮೂರೂ ಘಂಟೆ ನಿಂತರು ಪರವಾಗಿಲ್ಲ ಲಂಚ ಕೊಡುವುದು ಬೇಡ, ನನ್ನೆಷ್ಟು ಸಲಿ reject ಮಾಡಿದರು ಒಮ್ಮೆ ಸೆಲೆಕ್ಟ್ ಮಾಡಿ ಪರವಾನಗಿ ಕೊಟ್ಟೇ ಕೊಡುತ್ತಾನೆ ಎಂಬ ಛಲ ನಮ್ಮಲ್ಲಿ ಬರಬೇಕು.ರಾಜಕಾರಿಣಿಗಳನ್ನು ಆರಿಸುವಾಗ ಬಹಳ ಜೋಪಾನವಾಗಿ ಆಯ್ಕೆ ಮಾಡಬೇಕು. ಇಷ್ಟೆಲ್ಲಾ ಮಾಡಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮ್ಮ ಸೇವೆ ಇರುತ್ತದೆ.
ಸರಿ ಗೆಳೆಯರೇ, ಸಧ್ಯ ಅಣ್ಣ ಅವರ ಹೋರಾಟಕ್ಕೆ ಬೆಂಬಲ ಕೊಡೋಣ ನಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟದಲ್ಲಿ ಪಾಲ್ಗೊಳ್ಳೋಣ ಏನಂತೀರಿ.........???????
ನೀವು ಕೂಡ ಒಂದಲ್ಲ ಒಂದು ಜಾಗದಲ್ಲಿ ಭ್ರಷ್ಟಾಚಾರವನ್ನು ನಿಮ್ಮ ಅನುಕೂಲತೆಗೊಸ್ಕರ ಬೆಂಬಲಿಸಿರುತ್ತೀರಿ. ಹೌದು ತಾನೆ ಎದೆ ಮುಟ್ಟಿಕೊಂಡು ಹೇಳಿ......??? :) :)
**********************************************************************

No comments:

Post a Comment